ಸರಾಯಿ ಚಟದ ನಡುವೆ ಮಲಗಿದಲ್ಲಿಯೇ ಉಸಿರು ನಿಲ್ಲಿಸಿದ ವೆಲ್ಡರ್
ಕಾರವಾರ: ಕಾರವಾರದ ಶಿರವಾಡದಲ್ಲಿ ಕೆಲಸ ಮಾಡುತ್ತಿದ್ದ ಜೊಯಿಡಾ ಮೂಲದ ಯುವ ವೆಲ್ಡರ್ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಮೃತನ ಮುಖ ಹಾಗೂ ತಲೆಯ ಹಿಂಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತನನ್ನು ಅಶೋಕ ನಾರಾಯಣ ನಾಯ್ಕ (31) ಎಂದು ಗುರುತಿಸಲಾಗಿದೆ. ಈತ ಜೊಯಿಡಾ ತಾಲೂಕಿನ ತೊಳಸವಾಡಾ, ಕುಂಬಾರವಾಡಾ ನಿವಾಸಿಯಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ಕಾರವಾರದ ಶಿರವಾಡ ಸಮೀಪ ವೆಲ್ಡರ್ ಕೆಲಸ ಮಾಡುತ್ತಿದ್ದ. ಅಲ್ಲಿನ ನಾರಗೇರಿಯ ಬಾಡಿಗೆ ಕೊಠಡಿಯಲ್ಲಿ ತಮ್ಮ ಊರಿನವರಾದ ರೋಷನ್ ಸಂತಾನ ಪೆರೆರಾ ಅವರೊಂದಿಗೆ ವಾಸವಾಗಿದ್ದರು.
ಮೃತನ ಸಂಬಂಧಿಕ ರಮೇಶ ವಿಠ್ಠಲ ನಾಯ್ಕ ನೀಡಿದ ದೂರಿನ ಪ್ರಕಾರ, ಅಶೋಕ ಅವರಿಗೆ ಅತಿಯಾಗಿ ಮದ್ಯಪಾನ ಮಾಡುವ ಚಟವಿತ್ತು. ಟಿಬಿ ಹಾಗೂ ಕಾಮಾಲೆ (ಜಾಂಡಿಸ್) ಕಾಯಿಲೆಯಿಂದ ಬಳಲುತ್ತಿದ್ದರೂ ಮದ್ಯಪಾನವನ್ನು ಮುಂದುವರಿಸಿದ್ದ.
ಜುಲೈ 25ರ ರಾತ್ರಿ ಅಶೋಕ ಹಾಗೂ ರೋಷನ್ ಇಬ್ಬರೂ ಮದ್ಯ ಸೇವಿಸಿ ಊಟ ಮಾಡಿದ ಬಳಿಕ ಮಲಗಿದ್ದರು. ಮಧ್ಯರಾತ್ರಿ ವೇಳೆ ಅಶೋಕ ಮೂತ್ರ ವಿಸರ್ಜನೆಗಾಗಿ ಹೊರಗೆ ಹೋಗಿ, ಬಳಿಕ ಮರಳಿ ಬಂದು ಕೊಠಡಿಯನ್ನು ಒಳಗಿನಿಂದ ಲಾಕ್ ಮಾಡಿಕೊಂಡು ಮಲಗಿದ್ದ.
ಮರುದಿನ ಬೆಳಗ್ಗೆ ಸುಮಾರು 7.30ಕ್ಕೆ ರೋಷನ್ ಎದ್ದು ನೋಡಿದಾಗ ಅಶೋಕ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ, ಮುಖ ಹಾಗೂ ತಲೆಯ ಹಿಂಭಾಗದಲ್ಲಿ ಗಾಯಗಳಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ, ವೈದ್ಯರು ಅವರು ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತನ ಮುಖ ಮತ್ತು ತಲೆಯ ಹಿಂಭಾಗದಲ್ಲಿರುವ ಗಾಯಗಳ ಹಿನ್ನೆಲೆಯಲ್ಲಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಂಬಂಧಿಕರು ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.