ಅರಣ್ಯ ಇಲಾಖೆಯ ವಿರುದ್ಧ ರವೀಂದ್ರ ನಾಯ್ಕ ಆಕ್ರೋಶ
ಸಿದ್ದಾಪುರ: ನಿವೃತ್ತ ಸೈನಿಕ ಕೃಷ್ಣ ದ್ಯಾವ ನಾಯ್ಕ ಅವರ ಅರಣ್ಯ ಸಾಗುವಳಿ ಜಾಗದಲ್ಲಿ ನಡೆದ ಒಕ್ಕಲೆಬ್ಬಿಸುವ ಕ್ರಮ ದೇಶದ ಸೈನಿಕರಿಗೆ ಮಾಡಿದ ಅವಮಾನವಾಗಿದ್ದು, ಇಂತಹ ಘಟನೆಗಳು ಮರುಕಳಿಸಬಾರದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದರು.
ಸ್ಥಳೀಯ ತಹಶೀಲ್ದಾರ್ ಮಂಜುಳಾ ನಾಯ್ಕ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಜುಲೈ 30ರಂದು ಅರಣ್ಯ ಇಲಾಖೆ ಸಿಬ್ಬಂದಿ ಕೈಗೊಂಡ ಒಕ್ಕಲೆಬ್ಬಿಸುವ ಕ್ರಮದಿಂದ ದೇಶಸೇವೆ ಸಲ್ಲಿಸಿದ ಸೈನಿಕರಿಗೆ ಅವಮಾನವಾದಂತಾಗಿದೆ. ಇಂತಹ ಘಟನೆಗಳು ಸರ್ಕಾರ ಮತ್ತು ಜನಪ್ರತಿನಿಧಿಗಳಿಗೂ ಅಗೌರವ ತರುವಂತಿವೆ ಎಂದು ಅವರು ಆರೋಪಿಸಿದರು.
ಈ ವೇಳೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ನಿವೃತ್ತ ಸೈನಿಕ ಕೃಷ್ಣ ದ್ಯಾವ ನಾಯ್ಕ ಅವರ ತಾಯಿ ಸೀತಾ ದ್ಯಾವ ನಾಯ್ಕ ಅವರು ತಹಶೀಲ್ದಾರ್ ಎದುರು ಘಟನೆಯ ವಿವರವನ್ನು ತಿಳಿಸಿ, ತಮ್ಮ ಕುಟುಂಬಕ್ಕೆ ಆಗಿರುವ ಅನ್ಯಾಯವನ್ನು ವಿವರಿಸಿ ಕಣ್ಣೀರಿಟ್ಟರು.
ನಿವೃತ್ತ ಸೈನಿಕರ ವಿರುದ್ಧ ಕೈಗೊಂಡಿರುವ ಒಕ್ಕಲೆಬ್ಬಿಸುವ ಪ್ರಕ್ರಿಯೆ ಕಾನೂನುಬಾಹಿರವಾಗಿದ್ದು, ಅಗತ್ಯ ಕಾನೂನು ಪ್ರಕ್ರಿಯೆ ಪಾಲಿಸದೇ ಹೆಚ್ಚಿನ ಸಂಖ್ಯೆಯ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿಯನ್ನು ಬಳಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೋರಾಟಗಾರರ ವೇದಿಕೆಯ ಪ್ರಮುಖರು ಆರೋಪಿಸಿದರು.
ಚರ್ಚೆಯಲ್ಲಿ ಸಿಪಿಐ ಸೀತಾರಾಮ ಹಾಗೂ ಪಿಎಸ್ಐ ನಾಗಪ್ಪ ಭೋವಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು. ಸಂಚಾಲಕ ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ತಾಲೂಕು ಸಂಚಾಲಕ ಸಂಕೇತ ಹಲಗೇರಿ, ನಾಗಪತಿ ಗೌಡ ಹುಕ್ಕಳ್ಳಿ, ಮಂಜುನಾಥ ಮಡಿವಾಳ ಮುಟ್ಟಳ್ಳಿ, ಸೀತಾರಾಮ ಗೌಡ, ಮೋಹನ್ ಕಾನಕ್ಕಿ, ಬಿಡಿ ನಾಯ್ಕ ಕುರಗೆತೋಟ, ದಿನೇಶ್ ನಾಯ್ಕ ಬೇಡ್ಕಣಿ, ಕಾರ್ಲೆಸ್ ಫರ್ನಾಂಡಿಸ್ ಮಾವಿನಗುಂಡಿ, ರಾಮಚಂದ್ರ ನಾಯ್ಕ, ಹಾಜೀರಾ ಬೇಗಂ, ಅಬ್ದುಲ್ ಸುಭಾನ್ ಆರೆಂದೂರು, ವಾಸು ನಾಯ್ಕ, ತಿಮ್ಮ ತ್ಯಾರ್ಸಿ, ಅಣ್ಣಪ್ಪ ನಾಯ್ಕ ಅಕ್ಕುಂಜಿ, ಬಿ.ಎನ್. ನಾಯ್ಕ, ರಾಜು ಕಿರೇಕೋಡ, ಮಂಜುನಾಥ ನಾಯ್ಕ, ಜಯವಂತ ನಾಯ್ಕ ತ್ಯಾರ್ಸಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಘಟನೆಯ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ, ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಮಂಜುಳಾ ನಾಯ್ಕ ನಿಯೋಗಕ್ಕೆ ಭರವಸೆ ನೀಡಿದರು.
ಸಭೆಯ ವೇಳೆ ಒಕ್ಕಲೆಬ್ಬಿಸುವ ಪ್ರಕ್ರಿಯೆ ಕುರಿತು ಶಾಸಕರ ಗಮನಕ್ಕೆ ವಿಷಯ ತರಲಾಗಿತ್ತೇ ಎಂದು ರವೀಂದ್ರ ನಾಯ್ಕ ಪ್ರಶ್ನಿಸಿದಾಗ, ವಲಯ ಅರಣ್ಯಾಧಿಕಾರಿ (ಆರ್ಎಫ್ಒ) ಉಷಾ ಕಬ್ಬೇರ ಅವರು ಶಾಸಕರಿಗೆ ಈ ಕುರಿತು ಮಾಹಿತಿ ನೀಡಲಾಗಿಲ್ಲ ಎಂದು ತಿಳಿಸಿದರು ಎನ್ನಲಾಗಿದೆ.
ಇದರಿಂದ ಅಸಮಾಧಾನಗೊಂಡ ಹೋರಾಟಗಾರರು, ಜನಪ್ರತಿನಿಧಿಗಳ ಗಮನಕ್ಕೆ ವಿಷಯ ತಾರದೆ ಬಳಿಕ ಸರ್ಕಾರ ಮತ್ತು ಶಾಸಕರ ಹೆಸರನ್ನು ಬಳಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.