ಬೆಂಗಳೂರು: ಫೆಬ್ರವರಿ 14 ವ್ಯಾಲಂಟೈನ್ ದಿನ ಆಚರಿಸಲಾಗುತ್ತದೆ. ಪ್ರೇಮಿಗಳು ಪರಸ್ಪರ ಉಡುಗೊರೆ ವಿನಿಮಯ ಮಾಡಿಕೊಳ್ಳುವುದು, ಪ್ರೇಮ ನಿವೇದನೆ ಮಾಡಿಕೊಳ್ಳುವದೆಲ್ಲಾ ಸಾಮಾನ್ಯ. ಆದರೆ, ರಾಜ್ಯದಲ್ಲಿ ವಿಶಿಷ್ಠ ಹೋರಾಟಗಳಿಂದಲೇ ಹೆಸರಾಗಿರುವ ಪ್ರಸಿದ್ಧ ಹೋರಾಟಗಾರ ವಾಟಾಳ್ ನಾಗರಾಜ್ ಎರಡು ಕತ್ತೆಗಳಿಗೆ ಮದುವೆ ಮಾಡಿಸುವ ಮೂಲಕ ವ್ಯಾಲಂಡೈನ್ ದಿನ ಆಚರಿಸಿದ್ದಾರೆ.
ಪ್ರತಿವರ್ಷವೂ ಒಂದಿಲ್ಲೊಂದು ವಿಶೇಷ ರೀತಿಯಲ್ಲಿ ಪ್ರೇಮಿಗಳ ದಿನವನ್ನು ಆಚರಿಸುವ ವಾಟಾಳ್ ನಾಗರಾಜ್ ಈ ವರ್ಷ ಬೆಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿ ಕತ್ತೆಗಳ ಮೆರವಣಿಗೆ ನಡೆಸಿ, ಪೂಜೆ ಸಲ್ಲಿಸಿ, ಹೂವಿನ ಹಾರ ಹಾಕಿ ತಾಳಿ ಕಟ್ಟಿ ವಿವಾಹ ಮಾಡಿಸುವ ಮೂಲಕ ಪ್ರೇಮಿಗಳ ದಿನವನ್ನು ಆಚರಿಸಿದರು.
ಈ ವೇಳೆ ಮದುವೆ ಮುಗಿದ ಕೂಡಲೇ ಗಂಡು ಕತ್ತೆ ಸ್ಥಳದಿಂದ ಕಾಲ್ಕಿತ್ತಿದೆ! ಇದನ್ನು ಕಂಡು ಸೇರಿದ್ದ ಸಾರ್ವಜನಿಕರು ಜೋರಾಗಿ ನಕ್ಕಿದ್ದಾರೆ. ಆ ಬಳಿಕ ಮತ್ತೆ ಗಂಡು ಕತ್ತೆಯನ್ನು ಹಿಡಿದು ತಂದು ಮದುವೆ ಮಾಡಿಸಲಾಗಿದೆ. ಪ್ರೇಮ ವಿವಾಹ ಆಗುವವರಿಗೆ ಸೂಕ್ತ ಭದ್ರತೆ ನೀಡಬೇಕು ಮತ್ತು ಸರ್ಕಾರದ ವತಿಯಿಂದ 3 ಲಕ್ಷ ರೂ ಹಣ ನೀಡಬೇಕು ಎಂದು ಪ್ರೇಮಿಗಳ ಪರವಾಗಿ ವಾಟಾಳ್ ಆಗ್ರಹಿಸಿದರು.