ಮರಾಠಿಕೊಪ್ಪದ ರಾಮಚಂದ್ರ ಕಾಗಲಕರ ಅವರ ಮನೆಯಲ್ಲಿ ನಡೆದ ಘಟನೆ
ಶಿರಸಿ: ಮನೆ ಬಾಗಿಲಿನ ಬೀಗವನ್ನು ಮೀಟಿ ಒಳನುಗ್ಗಿದ ಕಳ್ಳರು, ಕಬ್ಬಿಣದ ಟ್ರೆಝರಿಯ ಲಾಕರ್ ಮುರಿದು ನಗದು ಹಾಗೂ ಚಿನ್ನ–ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಶಿರಸಿಯ ಮರಾಠಿಕೊಪ್ಪದಲ್ಲಿ ನಡೆದಿದೆ.
ವಿದ್ಯಾನಗರದ ಮರಾಠಿಕೊಪ್ಪದ 6ನೇ ಕ್ರಾಸ್, 1ನೇ ಮೇನ್ ರಸ್ತೆಯ ನಿವಾಸಿ ರಾಮಚಂದ್ರ ನಾಗೇಶ ಕಾಗಲಕರ ಅವರು ನೀಡಿದ ದೂರಿನ ಆಧಾರದ ಮೇಲೆ ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.15ರ ಬೆಳಗ್ಗೆ 11.30ರಿಂದ ಆ.16ರ ರಾತ್ರಿ 8.30ರ ನಡುವಿನ ಅವಧಿಯಲ್ಲಿ ಮನೆಯ ಮುಂದಿನ ಬಾಗಿಲಿನ ಬೀಗವನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ಕಳ್ಳರು ಒಳನುಗ್ಗಿದ್ದಾರೆ. ಬಳಿಕ ಅವರ ಮಗ ಮಲಗುವ ಕೋಣೆಯಲ್ಲಿದ್ದ ಕಬ್ಬಿಣದ ಟ್ರೆಝರಿಯ ಲಾಕರ್ನ್ನು ಮೀಟಿ ತೆರೆಯಲಾಗಿದೆ.
ಟ್ರೆಝರಿಯಲ್ಲಿದ್ದ ₹2,000 ನಗದು, ಸುಮಾರು 30 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ ಸುಮಾರು 3 ಕೆ.ಜಿ ತೂಕದ ಬೆಳ್ಳಿ ಆಭರಣಗಳು ಕಳುವಾಗಿವೆ. ಚಿನ್ನದ ಆಭರಣಗಳ ಅಂದಾಜು ಮೌಲ್ಯ ₹3.10 ಲಕ್ಷ ಹಾಗೂ ಬೆಳ್ಳಿ ಆಭರಣಗಳ ಅಂದಾಜು ಮೌಲ್ಯ ₹5.50 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ. ಒಟ್ಟಾರೆ ನಗದು ಸೇರಿದಂತೆ ಸುಮಾರು ₹8.62 ಲಕ್ಷ ಮೌಲ್ಯದ ವಸ್ತುಗಳು ಕಳುವಾಗಿದ್ದು, ಕಳುವಾದ ವಸ್ತುಗಳ ಪತ್ತೆ ಹಾಗೂ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.