ಶಿರಸಿ: ಸಾಗರಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ 35 ವರ್ಷದ ವ್ಯಕ್ತಿಯೊಬ್ಬರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿರಸಿಯ ರಾಮನಬೈಲ್ ನಿವಾಸಿ, ಮೂಲತಃ ಸಾಗರದ ಎಸ್.ಎನ್. ನಗರ, ಇಂದಿರಾ ಕಾಲೇಜು ಸಮೀಪದ ನಿವಾಸಿಯಾಗಿರುವ ಕೃಷ್ಣ ಆರ್. (35) ನಾಪತ್ತೆಯಾಗಿರುವ ವ್ಯಕ್ತಿ. ಇವರು ವೃತ್ತಿಯಲ್ಲಿ ಚಾಲಕರಾಗಿದ್ದಾರೆ.
ಆಗಸ್ಟ್ 8ರಂದು ಮೊಟ್ಟೆ ಪೂರೈಕೆ ಮಾಡುವ ವಾಹನದಲ್ಲಿ ಶಿರಸಿಯ ಇಸಳೂರಿನ ಹೊಳೆಬೈಲ್ನಲ್ಲಿರುವ ಪತ್ನಿಯ ತವರು ಮನೆಗೆ ಬಂದಿದ್ದ ಕೃಷ್ಣ, ಮಗನ ಆರೋಗ್ಯ ವಿಚಾರಿಸಿ ಅಲ್ಲಿಂದ ತೆರಳಿದ್ದರು. ಬಳಿಕ ಆಗಸ್ಟ್ 10ರಂದು ಬೆಳಗ್ಗೆ ಸುಮಾರು 9 ಗಂಟೆಗೆ ಪತ್ನಿಯ ಮೊಬೈಲ್ಗೆ ಕರೆ ಮಾಡಿ ಸಾಗರಕ್ಕೆ ಹೋಗಿ ಬರುವುದಾಗಿ ತಿಳಿಸಿದ್ದಾರೆ. ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಇದುವರೆಗೆ ಮನೆಗೆ ಮರಳಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕುಟುಂಬಸ್ಥರು ಹಾಗೂ ಪರಿಚಯಸ್ಥರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಪತ್ನಿ ಶಿಲ್ಪಾ ಅವರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಕೃಷ್ಣ ಅವರ ಪತ್ತೆಗೆ ಮುಂದಾಗಿದ್ದಾರೆ.