ಶಿರಸಿ: ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪಿಕಪ್ ವಾಹನ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಶಿರಸಿ ತಾಲೂಕಿನ ಕಾಗೇರಿ ಕ್ರಾಸ್ ಸಮೀಪ ಕಾಗೇರಿ-ಬರೂರು ರಸ್ತೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಶಿರಸಿ ತಾಲೂಕಿನ ಕಸ್ತೂರಬಾ ನಗರದ ನಿವಾಸಿ ವಿಜಯಕುಮಾರ ರವೀಂದ್ರ ಶೆಟ್ಟಿ ಎಂಬಾತ ಕೆಎ-31/ಎ-6465 ನೋಂದಣಿ ಸಂಖ್ಯೆಯ ಪಿಕಪ್ ವಾಹನದ ಚಾಲಕರಾಗಿದ್ದಾನೆ.
ಆ.22ರಂದು ಬೆಳಗ್ಗೆ ಸುಮಾರು 9.05ರ ವೇಳೆಗೆ ವಿಜಯಕುಮಾರ ಪಿಕಪ್ ವಾಹನವನ್ನು ಶಿರಸಿ ಕಡೆಯಿಂದ ಬರೂರು ಕಡೆಗೆ ಕಾಗೇರಿ-ಬರೂರು ರಸ್ತೆಯಲ್ಲಿ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದಾನೆ ಎನ್ನಲಾಗಿದೆ.
ಕಾಗೇರಿ ಕ್ರಾಸ್ ಸಮೀಪ ವಾಹನದ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯ ತೀರಾ ಬಲಭಾಗಕ್ಕೆ ಚಲಿಸಿದ ಪಿಕಪ್, ಎದುರಿನಿಂದ ಕೆಂಚಗದ್ದೆ ಕಡೆಯಿಂದ ಶಿರಸಿ ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದಾಪುರ ತಾಲೂಕಿನ ದೇವಿಸರ ಸಮೀಪದ ಸರನಗದ್ದೆಯ ನಿವಾಸಿ, ನಿಸರ್ಗ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ 36 ವರ್ಷದ ನೇತ್ರಾವತಿ ಕೋಂ ಗಣಪತಿ ಮುಕ್ರಿ ಅವರ ಎಡಗಾಲಿನ ಮೊಣಕಾಲಿಗೆ ಗಾಯವಾಗಿದೆ. ಇದೇ ವೇಳೆ ವಿನಾಯಕ ವೆಂಕಟ್ರಮಣ ಹೆಗಡೆ ಅವರ ಮೂಗಿಗೆ ರಕ್ತಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ಕುರಿತು ನೇತ್ರಾವತಿ ಅವರು ಶನಿವಾರ ಮಧ್ಯಾಹ್ನ 2.10ಕ್ಕೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.