ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದಲ್ಲಿ ನಡೆಯುತ್ತಿರುವ ಪವಿತ್ರ ಚಾತುರ್ಮಾಸ ಕಾರ್ಯಕ್ರಮದಲ್ಲಿ ಉದ್ಯಮಿ, ಬಿಜೆಪಿ ಮುಖಂಡ ಮಾಸ್ತಪ್ಪ ನಾಯ್ಕ ಬಲಸೆ ಭಾಗವಹಿಸಿ, ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ದಿವ್ಯ ದರ್ಶನಾಶೀರ್ವಾದ ಪಡೆದರು.
ಚಾತುರ್ಮಾಸದ ಅಂಗವಾಗಿ ನಡೆದ ‘ಅನ್ನಬ್ರಹ್ಮ’ ಪ್ರವಚನದಲ್ಲಿ ಜಗದ್ಗುರುಗಳು ನೀಡಿದ ಆರೋಗ್ಯ ಮತ್ತು ಆಹಾರ ಪದ್ಧತಿಗೆ ಸಂಬಂಧಿಸಿದ ಸಂದೇಶವನ್ನು ಆಲಿಸುವ ಅವಕಾಶವೂ ಅವರಿಗೆ ದೊರೆಯಿತು.
ಬದಲಾಗುತ್ತಿರುವ ಜೀವನಶೈಲಿಯ ನಡುವೆ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ಉತ್ತಮ ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದರ ಮೂಲಕ ದೈಹಿಕ ಆರೋಗ್ಯದ ಜೊತೆಗೆ ಆರೋಗ್ಯಕರ ವ್ಯಕ್ತಿತ್ವವನ್ನೂ ರೂಪಿಸಿಕೊಳ್ಳಬಹುದು ಎಂಬ ಜಗದ್ಗುರುಗಳ ಸಂದೇಶ ಜೀವನಕ್ಕೆ ಮಾರ್ಗದರ್ಶನ ನೀಡುವಂತಿದೆ ಎಂದು ಮಾಸ್ತಪ್ಪ ನಾಯ್ಕ ಬಲಸೆ ಸಂತಸ ವ್ಯಕ್ತಪಡಿಸಿದರು.
ಗುರುಗಳ ಸಾನ್ನಿಧ್ಯದಲ್ಲಿ ಕುಳಿತು ಅವರ ಅಮೃತವಾಣಿಯನ್ನು ಆಲಿಸುವುದು ಹಾಗೂ ಪವಿತ್ರ ಚಾತುರ್ಮಾಸದ ಸಂದರ್ಭದಲ್ಲಿ ಆಶೀರ್ವಾದ ಪಡೆಯುವುದು ತಮ್ಮ ಪಾಲಿಗೆ ಪುಣ್ಯದ ಮತ್ತು ಸ್ಮರಣೀಯ ಕ್ಷಣವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವ ನಾಯ್ಕ, ಕೃಷ್ಣ ಬಲಸೆ, ನಾಗರಾಜ ನಾಯ್ಕ, ದಿನೇಶ್ ದೇವಾಡಿಗ, ನವೀನ ನಾಯ್ಕ, ರಾಘು ನಾಯ್ಕ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಜಗದ್ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನ ಸಮಾಜದ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ, ಸನ್ಮಾರ್ಗ ಹಾಗೂ ಸಾರ್ಥಕ ಜೀವನದತ್ತ ಸಾಗಲು ಪ್ರೇರಣೆಯಾಗಲಿ ಎಂದು ಮಾಸ್ತಪ್ಪ ನಾಯ್ಕ ಬಲಸೆ ಆಶಿಸಿದರು.