ಕಾರವಾರ: ಸನಾತನ ಧರ್ಮ ಹಾಗೂ ಮಠ-ಮಾನ್ಯಗಳ ಕುರಿತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ನೀಡಿರುವ ಹೇಳಿಕೆಯನ್ನು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಖಂಡಿಸಿದ್ದಾರೆ.
ಮತೀಯ ಓಲೈಕೆಗಾಗಿ ಸನಾತನ ಧರ್ಮ ಹಾಗೂ ಮಠ-ಮಾನ್ಯಗಳನ್ನು ತುಚ್ಛವಾಗಿ ಮಾತನಾಡಿರುವುದು ಕಾಂಗ್ರೆಸ್ ಸರ್ಕಾರದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಸಂವಿಧಾನಬದ್ಧ ಜವಾಬ್ದಾರಿಯುತ ಹುದ್ದೆಯಲ್ಲಿರುವ ಸಚಿವರು ನಾಡಿನ ಜನತೆಗೆ ಮಾದರಿಯಾಗಬೇಕಿದ್ದು, ಧರ್ಮಗಳ ನಡುವೆ ದ್ವೇಷಕ್ಕೆ ಕಾರಣವಾಗುವಂತಹ ಹೇಳಿಕೆಗಳನ್ನು ನೀಡುವುದು ಖಂಡನೀಯ. ಶೈಕ್ಷಣಿಕ ಕ್ಷೇತ್ರದ ಹೊಣೆ ಹೊತ್ತಿರುವ ಸಚಿವರೇ ಮತಬ್ಯಾಂಕ್ ರಾಜಕಾರಣಕ್ಕಾಗಿ ಇಂತಹ ಹೇಳಿಕೆ ನೀಡುವುದು ಯುವಜನತೆಗೆ ತಪ್ಪು ಸಂದೇಶ ನೀಡುತ್ತದೆ ಎಂದು ಕಾಗೇರಿ ಹೇಳಿದ್ದಾರೆ.
ಕೋಟ್ಯಂತರ ಜನರ ಶ್ರದ್ಧಾಕೇಂದ್ರಗಳಾಗಿರುವ ದೇವಾಲಯಗಳು ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಮಠ-ಮಾನ್ಯಗಳನ್ನು ಹಗುರವಾಗಿ ಕಾಣುವ ಮನಸ್ಥಿತಿ ಕ್ಷಮಾರ್ಹವಲ್ಲ. ಸರ್ಕಾರದ ಇಂತಹ ನೀತಿಗೆ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಚಿವ ಬಸವರಾಜ ರಾಯರೆಡ್ಡಿ ಅವರು ಸನಾತನ ಧರ್ಮೀಯರ ಕ್ಷಮೆಯಾಚಿಸಬೇಕು. ಈ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಕಾಗೇರಿ ಎಚ್ಚರಿಸಿದ್ದಾರೆ.