ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ಆರೋಗ್ಯಕರ ಬೀಜ ಅತ್ಯಂತ ಮುಖ್ಯ. ಗಟ್ಟಿಯಾದ ಅಡಿಪಾಯದ ಮೇಲೆ ಕಟ್ಟಿದ ಮನೆ ಹೇಗೆ ಬಲವಾಗಿರುತ್ತದೋ, ಹಾಗೆಯೇ ರೋಗರಹಿತ ಬೀಜದಿಂದ ಬೆಳೆ ಉತ್ತಮವಾಗಿ ಬೆಳೆಯುತ್ತದೆ. ಆದರೆ ಬೀಜಗಳು ಮಣ್ಣಿನಲ್ಲಿರುವ ಹುಳುಹುಪ್ಪಟೆ, ಫಂಗಸ್ ಹಾಗೂ ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದರಿಂದ ಮೊಳಕೆ ಕಡಿಮೆಯಾಗುವುದು ಮತ್ತು ಉತ್ಪಾದನೆ ಕುಸಿಯುವುದು ಸಾಮಾನ್ಯ. ಇಂತಹ ಸಮಸ್ಯೆಗೆ ಸಹಜ ಹಾಗೂ ಕಡಿಮೆ ವೆಚ್ಚದ ಪರಿಹಾರವೇ ಬೀಜಾಮೃತ.
ಬೀಜಾಮೃತ ಎಂದರೇನು?: “ಬೀಜಾಮೃತ” ಅಂದರೆ ಬೀಜಗಳಿಗೆ ಅಮೃತದಂತೆ ಕೆಲಸ ಮಾಡುವ ದ್ರವ. ಬಿತ್ತನೆಗೆ ಮುನ್ನ ಬೀಜಗಳನ್ನು ಈ ದ್ರವದಲ್ಲಿ ತೋಯಿಸಿದರೆ-ಬೀಜಗಳಿಗೆ ರೋಗ ನಿರೋಧಕ ಶಕ್ತಿ ಬರುತ್ತದೆ, ಮೊಳಕೆಯೊಡೆಯುವ ಪ್ರಮಾಣ ಹೆಚ್ಚುತ್ತದೆ, ಸಸಿ ಬಲವಾಗಿ ಬೆಳೆಯುತ್ತದೆ, ಮಣ್ಣಿನ ಆರೋಗ್ಯ ಸುಧಾರಿಸುತ್ತದೆ. ಇದು ರಾಸಾಯನಿಕ ಔಷಧಿಗಳಿಗೆ ಪರ್ಯಾಯವಾಗಿ ಬಳಸಬಹುದಾದ ಸುರಕ್ಷಿತ ವಿಧಾನ.
ಬೀಜಾಮೃತ ತಯಾರಿಸಲು ಅಗತ್ಯವಿರುವುದು: 5 ಕೆಜಿ ದೇಸೀ ಹಸುವಿನ ಗೋಮಯ, 5 ಲೀಟರ್ ದೇಸೀ ಹಸುವಿನ ಗೋಮೂತ್ರ, 250 ಗ್ರಾಂ ಸುಣ್ಣ, 20 ಲೀಟರ್ ನೀರು, ಬೆಳೆ ಬೆಳಯುವ ಹೊಲದ ಒಂದು ಮುಷ್ಟಿ ಮಣ್ಣು
ವಸ್ತುವಿನ ಮಹತ್ವ:
- ಗೋಮಯ ಮತ್ತು ಗೋಮೂತ್ರ – ಉಪಯುಕ್ತ ಜೀವಾಣುಗಳನ್ನು ಒದಗಿಸುತ್ತವೆ, ರೋಗಕಾರಕ ಜೀವಿಗಳನ್ನು ನಿಯಂತ್ರಿಸುತ್ತವೆ.
- ಸುಣ್ಣ – ಹಾನಿಕರ ಜೀವಾಣುಗಳನ್ನು ಕಡಿಮೆ ಮಾಡುತ್ತದೆ.
- ಹೊಲದ ಮಣ್ಣು – ಸ್ಥಳೀಯ ಸೂಕ್ಷ್ಮ ಜೀವಿಗಳನ್ನು ಸೇರಿಸುತ್ತದೆ.
ತಯಾರಿಸುವ ವಿಧಾನ: ಸ್ವಚ್ಛವಾದ ಪಾತ್ರೆಯಲ್ಲಿ 20 ಲೀಟರ್ ನೀರು ಹಾಕಿ.ಗೋಮಯವನ್ನು ಬಟ್ಟೆಯಲ್ಲಿ ಕಟ್ಟಿ ನೀರಿನಲ್ಲಿ ಕೆಲವು ಗಂಟೆಗಳು ಇಡಿ. ನಂತರ ಚೆನ್ನಾಗಿ ಒತ್ತಿ ಅದರ ಸಾರ ನೀರಿನಲ್ಲಿ ಬೆರೆಸಿ. ಅದಕ್ಕೆ ಗೋಮೂತ್ರ, ಸುಣ್ಣ ಮತ್ತು ಹೊಲದ ಮಣ್ಣು ಸೇರಿಸಿ.ಮರದ ಕಡ್ಡಿಯಿಂದ ಚೆನ್ನಾಗಿ ಕಲಸಿ.ಈ ಮಿಶ್ರಣವನ್ನು 24 ಗಂಟೆಗಳ ಕಾಲ ನೆನೆಸಿಡಿ. ದಿನಕ್ಕೆ ಎರಡು ಬಾರಿ ಕದಡಬೇಕು. ಇದಾದ ಬಳಿಕ ಬೀಜಾಮೃತ ಬಳಕೆಗಾಗಿ ಸಿದ್ಧವಾಗುತ್ತದೆ.
ಬಳಕೆ ಮಾಡುವ ವಿಧಾನ: ಬಿತ್ತನೆಗೆ ಮುನ್ನ ಬೀಜಗಳನ್ನು ಬೀಜಾಮೃತದಲ್ಲಿ ಚೆನ್ನಾಗಿ ತೋಯಿಸಿ. ನಂತರ ನೆರಳಿನಲ್ಲಿ ಒಣಗಿಸಿ. ಒಣಗಿದ ಬಳಿಕ ಬಿತ್ತನೆ ಮಾಡಬಹುದು. ಇದು ಬೀಜಗಳ ಮೇಲೆ ಸಹಜ ರಕ್ಷಣಾ ಪದರವನ್ನು ರಚಿಸಿ, ಮಣ್ಣಿನಲ್ಲಿರುವ ರೋಗಕಾರಕ ಸೂಕ್ಷ್ಮ ಜೀವಿಗಳಿಂದ ಕಾಪಾಡುತ್ತದೆ.
ಬೀಜಾಮೃತದ ಲಾಭಗಳು: ರಾಸಾಯನಿಕ ಬಳಕೆ ಕಡಿಮೆಯಾಗುತ್ತದೆ.ಮೂಲ ವಸ್ತುಗಳು ಸ್ಥಳೀಯವಾಗಿಯೇ ಸಿಗುವುದರಿಂದವೆಚ್ಚ ಕಡಿಮೆ. ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಸಸಿ ಬಲವಾಗಿ ಬೆಳೆಯುತ್ತದೆ. ಪರಿಸರ ಸ್ನೇಹಿ ಕೃಷಿಗೆ ಸಹಕಾರಿ.