Saturday, May 30, 2026
HomeLocal Newsಉಳಿದವರು ಕಂಡಂತೆ!

ಉಳಿದವರು ಕಂಡಂತೆ!

ಯಲ್ಲಾಪುರ: ಯಲ್ಲಾಪುರದಲ್ಲಿ ಮೊನ್ನೆಯಷ್ಟೇ ಎರಡು ದಿನಗಳ ಕಾಲ ನಡೆದ ಹವ್ಯಕ ಮಹಾಸಭಾದ ‘ಸಂಸ್ಕಾರೋತ್ಸವ–ಹವ್ಯಕ ಪ್ರತಿಬಿಂಬ’ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ ಬೆನ್ನಲ್ಲೇ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಯೊಂದು ಆರಂಭವಾಗಿದೆ.

ಕಾರ್ಯಕ್ರಮದಲ್ಲಿ ವಿವಿಧ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಮುದಾಯದ ಚಟುವಟಿಕೆಗಳು ಶಿಸ್ತುಬದ್ಧವಾಗಿ ನಡೆದಿದ್ದು, ಭಾಗವಹಿಸಿದವರು ಕಾರ್ಯಕ್ರಮದ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಆದರೆ ಕಾರ್ಯಕ್ರಮ ಮುಗಿದ ಮರುದಿನ ವಾಟ್ಸಪ್‌ ಗುಂಪೊಂದರಲ್ಲಿ ಮಾಜಿ ಸಂಸದ ಹಾಗೂ ಹಿಂದೂ ಫೈರ್‌ ಬ್ರ್ಯಾಂಡ್‌ ಎಂದೇ ಹೆಸರಾಗಿರುವ ಅನಂತಕುಮಾರ್‌ ಹೆಗಡೆ ಕುರಿತು ಆರೋಪವೊಂದು ಹರಿದಾಡಿದೆ.

ಅನಂತಕುಮಾರ್‌ ಹೆಗಡೆ ವೇದಿಕೆ ಕಾರ್ಯಕ್ರಮದ ವೇಳೆ ಶೂ ಧರಿಸಿಯೇ ವೇದಿಕೆ ಏರಿದ್ದಾರೆ ಎಂಬ ಸಂದೇಶ ವಾಟ್ಸಪ್‌ ಗ್ರೂಪ್‌ ಒಂದರಲ್ಲಿ ಹಂಚಿದ್ದು, ಇದನ್ನು ಕೆಲವರು ಅಸಮಾಧಾನದ ದೃಷ್ಟಿಯಿಂದ ಪ್ರಶ್ನಿಸಿ, ʻಎಲ್ಲೆಡೆಯೂ ಕಲ್ಲು ಹುಡುಕಬೇಡಿʼ ಎಂದು ಪ್ರತಿಕ್ರಿಯಿಸಿದ್ದಾರೆ.

ವೇದಿಕೆ ಏರಿದ ಸಂದರ್ಭದಲ್ಲಿ ಅನಂತಕುಮಾರ್‌ ಹೆಗಡೆ ಅವರು ಕೇವಲ ಸಾಕ್ಸ್‌ ಮಾತ್ರ ಧರಿಸಿರುವುದು.

ಇದಕ್ಕೆ ಪ್ರತ್ಯುತ್ತರವಾಗಿ ಅವರ ಬೆಂಬಲಿಗರು ಹಾಗೂ ಕಾರ್ಯಕ್ರಮದಲ್ಲಿ ಹಾಜರಿದ್ದ, ಅವರೊಂದಿಗೇ ಜೊತೆಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಕೆಲವರು ಸ್ಪಷ್ಟನೆ ನೀಡಿದ್ದು, ಇದು ಅಪಪ್ರಚಾರದ ಪರಮಾವಧಿ ಎಂದಿದ್ದಾರೆ.

ಈ ಬಗ್ಗೆ ಬಿಜೆಪಿ ಯಲ್ಲಾಪುರ ಮಂಡಲದ ಅಧ್ಯಕ್ಷ ಪ್ರಸಾದ್‌ ಹೆಗಡೆ ಅವರನ್ನು ʻಕೆನರಾ ನೆಕ್ಸ್ಟ್‌ʼ ಸಂಪರ್ಕಿಸಿದಾಗ, ವಾಹನದಿಂದ ಇಳಿದು ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೆ ಬರುವಾಗ ಅನಂತಕುಮಾರ್‌ ಹೆಗಡೆ ಅವರು ಶೂ ಧರಿಸಿದ್ದರೂ ಕೂಡ, ಸಭಾಂಗಣ ಪ್ರವೇಶಿಸುವ ಮುನ್ನ,ಕಾರ್ಯಕ್ರಮಕ್ಕೆ ಆಗಮಿಸಿದ ಸಮಾಜ ಬಾಂಧವರು ಕಟ್ಟಡದ ಹೊರಭಾಗದಲ್ಲಿ ಎಲ್ಲಿ ಪಾದರಕ್ಷೆಗಳನ್ನು ಇರಿಸಿದ್ದರೋ ಅಲ್ಲಿಯೇ ತಮ್ಮ ಶೂ ಕಳಚಿಟ್ಟು ಪ್ರವೇಶಿಸಿದ್ದಾರೆ.

ಪೂರ್ತಿ ವಿಷಯ ಅರಿಯದೇ ಸುಮ್ಮನೇ ಅಪಪ್ರಚಾರ ಮಾಡುವುದೇ ಕೆಲವರ ಕೆಲಸವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರಲ್ಲದೆ, ಕಾರ್ಯಕ್ರಮದ ಉದ್ಘಾಟನೆಯ ಸಮಯದಲ್ಲಿ ಅನಂತಕುಮಾರ್‌ ಹೆಗಡೆ ಅವರು ಕೇವಲ ಸಾಕ್ಸ್‌ ಮಾತ್ರ ಧರಿಸಿರುವ ಫೋಟೋ ಒದಗಿಸಿ ಊಹಾಪೋಹಗಳಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಕುರಿತು ಸ್ಪಷ್ಟತೆಯಿಲ್ಲದೆ ಊಹಾಪೋಹಗಳಿಗೆ ಅವಕಾಶ ನೀಡಬಾರದು ಎಂಬ ಮಾತುಗಳೂ ಕೇಳಿಬರುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share