ಸಿದ್ದಾಪುರ: ಅಡಿಕೆ ತೋಟದಲ್ಲಿ ಮದ್ದು ಸಿಂಪಡಿಸುವ ವೇಳೆ ಆಕಸ್ಮಿಕವಾಗಿ ಅಡಿಕೆ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ತಾರಖಂಡ ಗ್ರಾಮದ ಹೇರೂರ ನಿವಾಸಿ ಮಾಬ್ಲೇಶ್ವರ ಗಣಪಾ ಗೌಡ (52) ಎಂದು ಗುರುತಿಸಲಾಗಿದೆ. ಇವರು ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಮೇ 23ರಂದು ಬೆಳಿಗ್ಗೆ ಹಾವೀನಬೀಳು ಗ್ರಾಮದ ಚಿಟ್ಟಟ್ಟೆಮನೆ ಊರಿನ ಕೃಷ್ಣ ಶಂಕರ ಗೌಡ ಅವರ ಅಡಿಕೆ ತೋಟದಲ್ಲಿ ಮಾಬ್ಲೇಶ್ವರ ಗೌಡ ಅವರು ಸುರಕ್ಷತಾ ಸಾಮಗ್ರಿಗಳಾದ ದೋಟಿ, ಹಗ್ಗ, ಕಡಕಮಣೆ ಇತ್ಯಾದಿಗಳ ಸಹಾಯದಿಂದ ಅಡಿಕೆ ಮರಕ್ಕೆ ಮದ್ದು ಸಿಂಪಡಿಸುತ್ತಿದ್ದರು.
ಈ ವೇಳೆ ಆಕಸ್ಮಿಕವಾಗಿ ಕೈ ಜಾರಿ ಸುಮಾರು 35ರಿಂದ 40 ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮೃತರ ಪುತ್ರ ಮನೋಜ ಗೌಡ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.