Saturday, May 30, 2026
HomeCrimeಸಾಲಕ್ಕೆ ಹೆದರಿದ ರೈತಆತ್ಮಹತ್ಯೆ

ಸಾಲಕ್ಕೆ ಹೆದರಿದ ರೈತಆತ್ಮಹತ್ಯೆ

ಶಿರಸಿ: ಕೃಷಿ ಸಾಲ ಮತ್ತು ಬೆಳೆ ನಷ್ಟದ ಸಂಕಷ್ಟದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ರೈತರೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ನಾಪುರ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ನಾಗೇಂದ್ರ ಬಂಗಾರಪ್ಪ ನಾಯ್ಕ (57) ಎಂದು ಗುರುತಿಸಲಾಗಿದೆ. ಇವರು ಗುಡ್ನಾಪುರ ಗ್ರಾಮದಲ್ಲಿ ಸುಮಾರು 1 ಎಕರೆ 8 ಗುಂಟೆ ಜಮೀನಿನಲ್ಲಿ ಅಡಿಕೆ, ಭತ್ತ ಹಾಗೂ ಶುಂಠಿ ಬೆಳೆ ಬೆಳೆದು ಜೀವನ ನಡೆಸುತ್ತಿದ್ದರು.

ಕೃಷಿಗಾಗಿ ಬನವಾಸಿ ಸೊಸೈಟಿಯಲ್ಲಿ ಸುಮಾರು 1 ಲಕ್ಷ ರೂ. ಸಾಲ ಹಾಗೂ ಕೈಗಡವಾಗಿ 63 ಸಾವಿರ ರೂ. ಸಾಲ ಪಡೆದಿದ್ದ ಅವರು, ಪರಿಚಯದವರ ಜಮೀನನ್ನು ಗೇಣಿಗೆ ಪಡೆದು ಕೃಷಿ ಮಾಡುತ್ತಿದ್ದರು. ಆದರೆ ಈ ವರ್ಷ ತೀವ್ರ ಬಿಸಿಲು ಮತ್ತು ನೀರಿನ ಸಮಸ್ಯೆಯಿಂದ ಅಡಿಕೆ ಹಾಗೂ ಶುಂಠಿ ಬೆಳೆ ಹಾನಿಗೊಳಗಾಗಿದ್ದು, ಸಾಲ ತೀರಿಸಲು ಸಾಧ್ಯವಾಗದೇ ಮಾನಸಿಕ ಒತ್ತಡದಲ್ಲಿದ್ದರು ಎಂದು ತಿಳಿದುಬಂದಿದೆ.

ಈ ನಡುವೆ ಮನೆಯಲ್ಲಿದ್ದ ಬಂಗಾರವನ್ನು ಅಡವಿಟ್ಟು ಕೃಷಿ ಸಾಲ ತೀರಿಸಿ ಮತ್ತೆ ಸಾಲ ಪಡೆಯುವ ಯೋಚನೆಯಲ್ಲಿದ್ದರೆಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮೇ 14ರಂದು ಮನೆಯವರು ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ನಾಗೇಂದ್ರ ನಾಯ್ಕ ಅವರು ಕೀಟನಾಶಕ ಸೇವಿಸಿ, ಬಳಿಕ ಬಾವಿಯ ಬಳಿ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಹಗ್ಗ ತುಂಡಾಗಿ ಬಾವಿಗೆ ಬಿದ್ದಿದ್ದ ಅವರನ್ನು ಸ್ಥಳೀಯರು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದ್ದರು.

ಮೊದಲು ಶಿರಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಹಾಗೂ ನಂತರ ಮಂಗಳೂರಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೇ 23ರಂದು ರಾತ್ರಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share