Ad
Home Crime ಮಾರಿ ಹೊರೆ ಸ್ಥಳಾಂತರ ವೇಳೆ ಗಲಾಟೆ

ಮಾರಿ ಹೊರೆ ಸ್ಥಳಾಂತರ ವೇಳೆ ಗಲಾಟೆ

0
12

ಕೊಲೆ ಯತ್ನ ಆರೋಪ, ಇಬ್ಬರ ವಿರುದ್ಧ ಪ್ರಕರಣ

ಕುಮಟಾ: ಗ್ರಾಮದಲ್ಲಿ ನಡೆಯುವ ಸಾಂಪ್ರದಾಯಿಕ ಮಾರಿ ಹೊರೆ ಸ್ಥಳಾಂತರಿಸುವ ವೇಳೆ ಗಲಾಟೆ ನಡೆಸಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ ಆರೋಪದಡಿ ಇಬ್ಬರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರಗಿ ನಿವಾಸಿ ಮಂಜುನಾಥ ವೆಂಕಟ್ರಮಣ ಪಟಗಾರ (42) ನೀಡಿದ ದೂರಿನ ಮೇರೆಗೆ ಮಾಸೂರ ಕ್ರಾಸ್ ಜನತಾ ಪ್ಲಾಟ್ ನಿವಾಸಿಗಳಾದ ಗಣೇಶ ಶ್ರೀನಿವಾಸ ನಾಯ್ಕ (26) ಹಾಗೂ ಕೃಷ್ಣಾ ಅಲಿಯಾಸ್ ವಿಕ್ಕಿ ಶ್ರೀನಿವಾಸ ನಾಯ್ಕ (23) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜೂನ್ 14ರಂದು ಸಂಜೆ ಸುಮಾರು 4.45ಕ್ಕೆ ಚಿತ್ರಗಿ ಹಳಕಾರ ಕ್ರಾಸ್ ಸಮೀಪ ಗ್ರಾಮಸ್ಥರು ಪ್ರತಿ ವರ್ಷದಂತೆ ರಸ್ತೆ ಬದಿಯಲ್ಲಿ ಹಾಕಿದ್ದ ಮಾರಿ ಹೊರೆಯನ್ನು ಲಾರಿಯಲ್ಲಿ ತುಂಬಿ ಹಣ್ಣಿಮಠಕ್ಕೆ ಕಳುಹಿಸುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಆರೋಪಿತರು ಬೈಕ್‌ನಲ್ಲಿ ಸ್ಥಳಕ್ಕೆ ಬಂದು, ರಸ್ತೆ ಮೇಲೆ ಕಸದ ರಾಶಿ ಹಾಕಿ ತೊಂದರೆ ಕೊಡುತ್ತಿದ್ದೀರಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಗಣೇಶ ನಾಯ್ಕ ಫಿರ್ಯಾದಿದಾರರ ಮೇಲೆ ಹಲ್ಲೆ ನಡೆಸಿ, ಕೈಗಳಿಂದ ಕುತ್ತಿಗೆ ಹಿಸುಕಿ ಉಗುರಿನಿಂದ ಪರಚಿ ದೂಡಿ ಹಾಕಿದ್ದಾನೆ. ಅಲ್ಲದೆ, ಕೃಷ್ಣಾ ಅಲಿಯಾಸ್ ವಿಕ್ಕಿ ಕೂಡ ಕಾಲಿನಿಂದ ಕುತ್ತಿಗೆಯನ್ನು ಮೆಟ್ಟಿ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಲ್ಲದೆ, ಮುಂದೆಯೂ ಸಿಕ್ಕರೆ ಕೊಲೆ ಮಾಡಿ ನಾಪತ್ತೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಗೆ ಸಂಬಂಧಿಸಿ ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!