ಯಲ್ಲಾಪುರ: ಗುಡ್ಡಗಾಡಿನ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಬೆಳಕು ಇನ್ನಷ್ಟು ಪ್ರಜ್ವಲಿಸಲಿ ಎಂಬ ಉದ್ದೇಶದಿಂದ ಮಂಗಳೂರಿನ ಸಹ್ಯಾದ್ರಿ ಸಂಚಯ ಟ್ರಸ್ಟ್ (ವನಚೇತನ) ತಂಡವು ತಾಲೂಕಿನ ಮಂಚಿಕೇರಿ ವಲಯದ ವಿವಿಧ ಶಾಲೆಗಳಲ್ಲಿ ಶೈಕ್ಷಣಿಕ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಿ ಮಕ್ಕಳ ಮುಖದಲ್ಲಿ ಸಂತಸದ ನಗು ಮೂಡಿಸಿತು.
ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಜಿಎಚ್ಪಿಎಸ್ ಚಿಕ್ಕೊತ್ತಿ, ಜಿಎಲ್ಪಿಎಸ್ ಸೋಮನಹಳ್ಳಿ, ಜಿಎಲ್ಪಿಎಸ್ ಕೆರೆಹೊಸಳ್ಳಿ, ಜಿಎಲ್ಪಿಎಸ್ ಬೊಮ್ಮನಹಳ್ಳಿ ಹಾಗೂ ಜಿಎಚ್ಪಿಎಸ್ ಬೈಚಗೋಡ ಶಾಲೆಗಳಿಗೆ ಭೇಟಿ ನೀಡಿದ ತಂಡವು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ನೋಟ್ಬುಕ್, ಛತ್ರಿ, ಚಿತ್ರಕಲಾ ಸಾಮಗ್ರಿಗಳು ಸೇರಿದಂತೆ ವಿವಿಧ ಶೈಕ್ಷಣಿಕ ವಸ್ತುಗಳನ್ನು ವಿತರಿಸಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ವನಚೇತನ ತಂಡದ ಸಂಚಾಲಕ ದಿನೇಶ್ ಹೊಳ್ಳ ಹಾಗೂ ಸದಸ್ಯರು ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ ಶಿಕ್ಷಣದ ಮಹತ್ವವನ್ನು ವಿವರಿಸಿದರು.
ಗುಡ್ಡಗಾಡಿನ ದುರ್ಗಮ ಪ್ರದೇಶಗಳಲ್ಲಿ ನೆಲೆಸಿರುವ ಶಾಲೆಗಳ ವಿದ್ಯಾರ್ಥಿಗಳು ಪ್ರತಿದಿನ ಕಾಡುಮಾರ್ಗಗಳನ್ನು ದಾಟಿ ಶಾಲೆಗೆ ಬರುತ್ತಿರುವ ಸವಾಲುಗಳನ್ನು ತಂಡದ ಸದಸ್ಯರು ಹತ್ತಿರದಿಂದ ಅವಲೋಕಿಸಿದರು. ಸೌಲಭ್ಯಗಳ ಕೊರತೆಯ ನಡುವೆಯೂ ಮಕ್ಕಳಲ್ಲಿ ಕಂಡುಬಂದ ಕಲಿಕೆಯ ಆಸಕ್ತಿ ಹಾಗೂ ಉತ್ಸಾಹವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಿಗೂ ಬೋಧನಾ ಕಾರ್ಯಕ್ಕೆ ಸಹಕಾರಿಯಾಗುವ ವಿವಿಧ ಶೈಕ್ಷಣಿಕ ಉಪಕರಣಗಳನ್ನು ವಿತರಿಸಲಾಯಿತು.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಮಾಜದ ವಿವಿಧ ಸಂಘಟನೆಗಳ ಸಹಕಾರ ಅತ್ಯಗತ್ಯವಾಗಿದ್ದು, ವನಚೇತನದಂತಹ ಸಂಸ್ಥೆಗಳು ಗ್ರಾಮೀಣ ಹಾಗೂ ಗುಡ್ಡಗಾಡಿನ ಮಕ್ಕಳ ಬದುಕಿನಲ್ಲಿ ಹೊಸ ಭರವಸೆ ಮೂಡಿಸುತ್ತಿವೆ. ಪ್ರತಿಯೊಂದು ಮಗುವಿನ ಕನಸಿಗೆ ರೆಕ್ಕೆ ನೀಡುವ ನಿಟ್ಟಿನಲ್ಲಿ ವನಚೇತನ ತಂಡ ಕೈಗೊಂಡಿರುವ ಈ ಸೇವೆ ಸಮಾಜಮುಖಿ ಕಾರ್ಯಗಳಿಗೆ ಮಾದರಿಯಾಗಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ವರದಿ: ಶ್ರೀಕಾಂತ ನಾಯ್ಕ, ಮಾವಿನಕಟ್ಟಾ.