ಯಲ್ಲಾಪುರ: ಯಲ್ಲಾಪುರ ತಾಲೂಕಿನ ಹುಲಿಮನೆ ಕ್ರಾಸ್ ಸಮೀಪ ಜೂನ್ 5ರಂದು ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಹಿನ್ನೆಲೆಯಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯನ್ನು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ನೇಕಾರಪೇಟೆ ನಿವಾಸಿ, ಪ್ರಸ್ತುತ ಯಲ್ಲಾಪುರದ ಸರ್ಕಾರಿ ಕಾಲೇಜು ಹಿಂಭಾಗ ವಾಸವಾಗಿದ್ದ ಫಕೀರಪ್ಪ ಮಾರುತಿ ಮಾಳಜನವರ (34) ಎಂದು ಗುರುತಿಸಲಾಗಿದೆ. ಅವರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
ಜೂನ್ 5ರಂದು ಸಂಜೆ 7.30 ಗಂಟೆ ಸುಮಾರಿಗೆ ಫಕೀರಪ್ಪ ಅವರು ತಮ್ಮ ಬೈಕ್ನಲ್ಲಿ ಮುಂಡಗೋಡ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದರು. ಯಲ್ಲಾಪುರ ತಾಲೂಕಿನ ಹುಲಿಮನೆ ಕ್ರಾಸ್ ಸಮೀಪ ತಲುಪಿದಾಗ, ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆಗೆ ತೆರಳುತ್ತಿದ್ದ ಬೈಕ್ ಸವಾರ ವೆಂಕಟರಮಣ ಮಹಾಬಲೇಶ್ವರ ಗೌಡ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಹೊಡೆದಿದ್ದಾರೆ.
ಅಪಘಾತದ ಪರಿಣಾಮ ಫಕೀರಪ್ಪ ಅವರಿಗೆ ಎಡ ಕಿವಿಯ ಮೇಲ್ಭಾಗ ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದು, ಎಡ ಹಣೆಗೆ ತೀವ್ರ ರಕ್ತಗಾಯ ಹಾಗೂ ಎಡ ಭುಜಕ್ಕೆ ಗಾಯಗಳಾಗಿದ್ದವು. ತಕ್ಷಣ ಅವರನ್ನು ಚಿಕಿತ್ಸೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಜೂನ್ 16ರಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಪಘಾತ ನಡೆದ ಸಂದರ್ಭದಲ್ಲಿ ಯಾರೂ ದೂರು ದಾಖಲಿಸದ ಕಾರಣ ಪ್ರಕರಣ ದಾಖಲಾಗಿರಲಿಲ್ಲ. ಫಕೀರಪ್ಪ ಅವರ ಸಾವಿನ ನಂತರ ಘಟನೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.