ಶಿರಸಿ: ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಿ ಕ್ರಾಸ್ ಬಳಿ ಅಕ್ರಮವಾಗಿ ನಡೆಯುತ್ತಿದ್ದ ಇಸ್ಪೀಟ್ ಜುಗಾರಾಟದ ಮೇಲೆ ಪೊಲೀಸರು ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿ 12,540 ರೂ ನಗದು ಸೇರಿದಂತೆ ಜುಗಾರಾಟಕ್ಕೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಇನ್ನೂ ಮೂವರು ಆರೋಪಿಗಳು ಪರಾರಿಯಾಗಿರುವ ಘಟನೆ ನಡೆದಿದೆ.
ಸೆ.2ರಂದು ಸಂಜೆ 6 ಗಂಟೆ ಸುಮಾರಿಗೆ ಕಲ್ಲಿ ಕ್ರಾಸ್ ಬಳಿ ಅಕ್ರಮ ಇಸ್ಪೀಟ್ ಜುಗಾರಾಟ ನಡೆಯುತ್ತಿರುವ ಬಗ್ಗೆ ಬನವಾಸಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪಿಎಸ್ಐ (ತನಿಖೆ) ರವೀಂದ್ರ ಬಿರಾದಾರ ಅವರು ನ್ಯಾಯಾಲಯದ ಅನುಮತಿ ಪಡೆದು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದರು.
ಶಿರಸಿ–ಬನವಾಸಿ ರಸ್ತೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಬಿದ್ರಳ್ಳಿ ಗ್ರಾಮಕ್ಕೆ ತೆರಳುವ ಕಚ್ಚಾ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ, ಮೇಣದಬತ್ತಿಯ ಬೆಳಕಿನಲ್ಲಿ ಹಣವನ್ನು ಪಣವಾಗಿಟ್ಟು ಅಂದರ್–ಬಾಹರ್ ಇಸ್ಪೀಟ್ ಜುಗಾರಾಟ ನಡೆಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ದಾಳಿಯ ವೇಳೆ ಶಿರಸಿ ಮರಾಠಿಕೊಪ್ಪದ ಸುಭಾಷ ನಗರದ ಚಾಲಕ ವೃತ್ತಿಯ ಮಂಜುನಾಥ ನಿಂಗಪ್ಪ ಗೌರಾಪುರ, ಉಂಚಳ್ಳಿ ಹಲಸಿನಕೊಪ್ಪದ ಮೀನುಗಾರಿಕೆ ವೃತ್ತಿಯ ಸುಭಾಷ ರಾಮಚಂದ್ರ ಶೇಟ್, ಉಂಚಳ್ಳಿಯ ನರಸಿಂಹ ಕೃಷ್ಣ ಭಟ್ ಸಿಕ್ಕಿಬಿದ್ದಿದ್ದು, ನಾಲ್ಕನೇ ಆರೋಪಿ ಸತೀಶ ಯಂಕಪ್ಪ ಪೂಜಾರಿ ಹಾಗೂ ಹೆಸರು–ವಿಳಾಸ ತಿಳಿಯದ ಇನ್ನಿಬ್ಬರು ದಾಳಿಯ ವೇಳೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದಾಳಿಯಲ್ಲಿ 12,540 ರೂ ನಗದು, ಇಸ್ಪೀಟ್ ಎಲೆಗಳು, ನೀಲಿ ಬಣ್ಣದ ಪ್ಲಾಸ್ಟಿಕ್ ತಾಡಪತ್ರೆ ಹಾಗೂ ನಾಲ್ಕು ಮೇಣದಬತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಪಿಎಸ್ಐ ರವೀಂದ್ರ ಬಿರಾದಾರ ಅವರು ಸರ್ಕಾರದ ಪರವಾಗಿ ನೀಡಿದ ದೂರಿನ ಆಧಾರದ ಮೇಲೆ ನ್ಯಾಯಾಲಯದ ಅನುಮತಿ ಪಡೆದ ಬಳಿಕ ಪ್ರಕರಣವನ್ನು ದಾಖಲಿಸಲಾಗಿದೆ.