ಶಿರಸಿ: ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಬೇಡ್ತಿ ಸಮಿತಿ ನಿಯೋಗವು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ ಅವರನ್ನು ಶುಕ್ರವಾರ ಶಿರಸಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ವೇಳೆ ಆಗಸ್ಟ್ 15ರ ನಂತರ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಸಮಿತಿ ಮುಖಂಡರೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
ಶಾಸಕ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ನಡೆದ ಭೇಟಿಯಲ್ಲಿ, ಬೇಡ್ತಿ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಕಳೆದ ಎಂಟು ತಿಂಗಳಿಂದ ನಡೆಯುತ್ತಿರುವ ಜನಾಂದೋಲನದ ವಿವರ, ತಜ್ಞರ ವರದಿ ಹಾಗೂ ಜಿಲ್ಲಾ ಕೆಡಿಪಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಸಚಿವರಿಗೆ ಮಾಹಿತಿ ನೀಡಿದರು.
ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಸಂಸ್ಥೆಗಳು ಹಾಗೂ ರೈತರು ಬೇಡ್ತಿ–ಅಘನಾಶಿನಿ ಕಣಿವೆ ಉಳಿಸುವ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಸಮಿತಿಯ ಮುಖಂಡ ರಮೇಶ್ ದುಬಾಶಿ ಅವರು, ಸ್ವರ್ಣವಲ್ಲೀ ಶ್ರೀಗಳು ಈ ಹೋರಾಟದ ಗೌರವಾಧ್ಯಕ್ಷರಾಗಿದ್ದು, ಅವರನ್ನು ಭೇಟಿ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು. ಇದೇ ವೇಳೆ ವಿ.ಎನ್. ಹೆಗಡೆ ಬೊಮ್ಮನಳ್ಳಿ, ವಿ.ಎಸ್. ಪಾಟೀಲ ಹಾಗೂ ಎಸ್.ಕೆ. ಭಾಗ್ವತ್ ಅವರು ಬೇಡ್ತಿ ಯೋಜನೆಯ ಡಿಪಿಆರ್ಗೆ ತಡೆ ನೀಡುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಚಿವ ಲಕ್ಷ್ಮಣ್ ಸವದಿ, ಬೇಡ್ತಿ ಚಳುವಳಿಯ ಕುರಿತು ಈಗಾಗಲೇ ಮಾಹಿತಿ ಇದೆ. ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷರಾಗಿದ್ದ ಅನಂತ ಅಶೀಸರ ಅವರ ವರದಿಯನ್ನೂ ಪರಿಶೀಲಿಸಿದ್ದೇನೆ. ಆಗಸ್ಟ್ 15ರ ಬಳಿಕ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಬೇಡ್ತಿ ಸಮಿತಿ ಮುಖಂಡರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ವಿಷಯದ ಕುರಿತು ಸಮಗ್ರವಾಗಿ ಚರ್ಚಿಸಲಾಗುವುದು. ಅದರ ದಿನಾಂಕವನ್ನು ಶೀಘ್ರವೇ ನಿಗದಿಪಡಿಸುತ್ತೇನೆ ಎಂದು ಭರವಸೆ ನೀಡಿದರು.