ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ವೇಳೆ ಸಾರ್ವಜನಿಕರ ಓಡಾಟ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ, ಭಟ್ಕಳ ನಗರದಲ್ಲಿರುವ ಅಮ್ಮನವರ ಹೊರೆಯನ್ನಿಡುವ (ಮುರಿನಕಟ್ಟೆ) ಸ್ಥಳಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಪ್ರಕ್ರಿಯೆ ಆರಂಭವಾಗಿದೆ.
ಈ ಕುರಿತು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಪ್ರಕಟಣೆ ಹೊರಡಿಸಿದ್ದು, ನಗರದ ವಿವಿಧ ಸಮುದಾಯಗಳ ಹಿರಿಯ ನಾಗರಿಕರು ಹಾಗೂ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಒಮ್ಮತದ ಆಧಾರದ ಮೇಲೆ ಪರ್ಯಾಯ ಸ್ಥಳವನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲರ ಸಹಮತಿಯಂತೆ, ಪ್ರಸ್ತುತ ಅಮ್ಮನವರ ಹೊರೆಯನ್ನು ಇಡಲಾಗುತ್ತಿರುವ ರಸ್ತೆಯಲ್ಲೇ ಮಿಡಿಯನ್ ನಿರ್ಮಾಣಕ್ಕೆ ಲಭ್ಯವಿರುವ ಜಾಗವನ್ನು ಪರ್ಯಾಯ ಸ್ಥಳವಾಗಿ ಆಯ್ಕೆ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ಸ್ಥಳೀಯ ತಾಲೂಕು ಆಡಳಿತದ ಸಹಯೋಗದಲ್ಲಿ ಆಯ್ಕೆಗೊಂಡ ಸ್ಥಳದಲ್ಲಿ ಮಿಡಿಯನ್ ಮತ್ತು ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕುರಿತು ಸ್ಥಳೀಯ ಮುಖಂಡರೊಂದಿಗೆ ಜಿಲ್ಲಾಡಳಿತ ಸಮಾಲೋಚನೆ ಪ್ರಾರಂಭಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.