ಭಟ್ಕಳ: ಹಗ್ಗದಿಂದ ಬಿಗಿಯಾಗಿ ಕಟ್ಟಿ, ನೀರು-ಮೇವು ಕೊಡದೇ ಲಾರಿಯಲ್ಲಿ ಸಾಗಿಸುತ್ತಿದ್ದ 11 ಜಾನುವಾರುಗಳನ್ನು ಭಟ್ಕಳ ಗ್ರಾಮೀಣ ಪೊಲೀಸರು ರಕ್ಷಿಸಿ, ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಜುಲೈ 20ರಂದು ರಾತ್ರಿ ಸುಮಾರು 9.35ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ-66ರ ಶಿರಾಲಿ ಚೆಕ್ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು, ಗುಜರಾತ್ ನೋಂದಣಿಯ ಲಾರಿಯೊಂದನ್ನು ತಡೆದು ಪರಿಶೀಲಿಸಿದರು. ಈ ವೇಳೆ ಲಾರಿಯಲ್ಲಿ 11 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಹಗ್ಗಗಳಿಂದ ಬಿಗಿಯಾಗಿ ಕಟ್ಟಿ, ನೀರು ಮತ್ತು ಮೇವು ನೀಡದೇ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ, ಯಾವುದೇ ಕಾನೂನುಬದ್ಧ ಅನುಮತಿ ಪಡೆಯದೆ ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಭಟ್ಕಳದ ಕೋಕ್ತಿ ನಗರದ ಮೊಹಮ್ಮದ್ ಔಫ್, ಗುಜರಾತ್ನ ಬೋಟಾದ ವಿಜಯಬಾಯ್ ಮಕ್ಕಾನ, ತೇಜಾಬಾಯ್ ಶಿಯಾಲಿಯಾ ಹಾಗೂ ದಿಲೀಪ್ಬಾಯ್ ರಾಠೋಡ್ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಸುಮಾರು ₹4.60 ಲಕ್ಷ ಮೌಲ್ಯದ 11 ಜಾನುವಾರುಗಳು, ₹8 ಲಕ್ಷ ಮೌಲ್ಯದ ಲಾರಿ ಹಾಗೂ ಜಾನುವಾರುಗಳನ್ನು ಕಟ್ಟಲು ಬಳಸಿದ್ದ ಹಗ್ಗಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಭಟ್ಕಳ ಗ್ರಾಮೀಣ ಠಾಣೆಯ ಪಿಎಸ್ಐ ಮಲ್ಲಿಕಾರ್ಜುನ ಕೊರಾಣಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ವಿನೋದ ಕುಮಾರ, ಸಂತೋಷ ನಾಯ್ಕ, ಕಿರಣ ತಿಳಗಂಜಿ ಹಾಗೂ ಮಂಜುನಾಥ ಖಾರ್ವಿ ಭಾಗವಹಿಸಿದ್ದರು.
ಮೂಕ ಜೀವಿಗಳಿಗೆ ಮಾತಾಡಲು ಬರುವುದಿಲ್ಲ… ಆದರೆ ಅವುಗಳ ಪರವಾಗಿ ಕಾನೂನು ಮಾತಾಡುತ್ತದೆ!