ಕುಮಟಾ: ಸಂಸತ್ ಕಲಾಪದ ರೀತಿಯಲ್ಲಿ ಚರ್ಚೆ, ವಿಚಾರ ಮಂಡನೆ ಹಾಗೂ ಪ್ರಸ್ತುತ ವಿಷಯಗಳ ಕುರಿತು ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ನಡೆದ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಕುಮಟಾದ ಕೆನರಾ ಎಕ್ಸಲೆನ್ಸ್ ಸಂಸ್ಥೆಯ ಇಬ್ಬರು ಪಿಯುಸಿ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಜಿಲ್ಲಾಡಳಿತ ಉತ್ತರ ಕನ್ನಡ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ತಾಲೂಕು ಆಡಳಿತ ಕುಮಟಾ, ಶಾಲಾ ಶಿಕ್ಷಣ ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆ, ತಾಲೂಕು ಯುವ ಸಂಸತ್ತು ಸಮಿತಿ ಹಾಗೂ ನಿರ್ಮಲಾ ಪ್ರೌಢಶಾಲೆ ಕುಮಟಾ ಇವರ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಕೆನರಾ ಎಕ್ಸಲೆನ್ಸ್ ಸಂಸ್ಥೆಯ ಪರವಾಗಿ ಪಿಯುಸಿ ವಿದ್ಯಾರ್ಥಿಗಳಾದ ಆಶ್ರಿತ್ ಜಿ. ಹಾಗೂ ಭುವನಾ ಹೆಗಡೆ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಉತ್ತಮವಾಗಿ ಪ್ರಸ್ತುತಿ ನೀಡಿದ ಇಬ್ಬರೂ ತಾಲೂಕು ಮಟ್ಟದಲ್ಲಿ ಜಯಗಳಿಸಿ ಜಿಲ್ಲಾಮಟ್ಟದ ಯುವ ಸಂಸತ್ತು ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಿ.ಜಿ. ಹೆಗಡೆ, ವಿಶ್ವಸ್ತರಾದ ಡಿ.ಎನ್. ಭಟ್ಟ, ಪ್ರಾಚಾರ್ಯರಾದ ಕಿರಣ್ ಭಟ್ಟ ಹಾಗೂ ಮಾರ್ಗದರ್ಶಕರಾದ ಪೂಜಾ ಭಟ್ಟ ಅವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.