ಕುಮಟಾ: ಆಟೋ ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾ ನಿಲ್ಲಿಸುವ ವಿಚಾರವಾಗಿ ವ್ಯಕ್ತಿಯೊಬ್ಬರಿಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಮೂವರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ರಸನ್ನ ಜಟ್ಟಿ ಮುಕ್ರಿ ನೀಡಿದ ದೂರಿನ ಪ್ರಕಾರ, ಜೂನ್ 19ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ಕುಮಟಾ ಹೊಸ ಬಸ್ ನಿಲ್ದಾಣದ ಆಟೋ ರಿಕ್ಷಾ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ದೂರಿನ ಪ್ರಕಾರ, ಆರೋಪಿತರಾದ ಶಂಕರ ದಾಮು ಉಪ್ಪಾರ, ಗಣಪತಿ ಮಾದೇವ ಉಪ್ಪಾರ ಹಾಗೂ ರಾಜೇಶ ಉಪ್ಪಾರ, ದೂರುದಾರರು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ತಿಳಿದಿದ್ದರೂ, “ಈ ಆಟೋ ಸ್ಟ್ಯಾಂಡ್ ನಮ್ಮವರಿಗೆ ಸೇರಿದ್ದು, ನೀನು ಇಲ್ಲಿ ರಿಕ್ಷಾ ನಿಲ್ಲಿಸಬಾರದು” ಎಂದು ತಡೆದಿದ್ದಾರೆ ಎನ್ನಲಾಗಿದೆ.
ಇದಕ್ಕೆ ದೂರುದಾರರು ಇದು ಸಾರ್ವಜನಿಕ ಆಟೋ ರಿಕ್ಷಾ ನಿಲ್ದಾಣ ಎಂದು ಪ್ರಶ್ನಿಸಿದಾಗ, ಆರೋಪಿತರು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಮೊದಲನೇ ಆರೋಪಿಯು ಎದೆಗೆ ಹೊಡೆದು ತಳ್ಳಿದ್ದಾನೆ. ಅಲ್ಲದೆ, ಇಲ್ಲಿ ಆಟೋ ನಿಲ್ಲಿಸಿ ವ್ಯವಹಾರ ನಡೆಸಿದರೆ ರಿಕ್ಷಾಗೆ ಬೆಂಕಿ ಹಚ್ಚುವುದಾಗಿ ಹಾಗೂ ಕೊಲೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.