ದಾಂಡೇಲಿ: ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ, ವಿಚ್ಛೇದನದ ಬೆದರಿಕೆ ಹಾಕಿ, ಬಳಿಕ ಮಕ್ಕಳೊಂದಿಗೆ ಮನೆಯಿಂದ ಹೊರಹಾಕಿದ ಆರೋಪದಡಿ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಗಣೇಶನಗರ ಅಂಬೇವಾಡಿ ನಿವಾಸಿ ಬೀಬಿ ಜೈನಬ ಮೊಹಮ್ಮದ ಮುಫೀಜ್ ಠಾಕೂರ ಅವರು ನೀಡಿದ ದೂರಿನ ಮೇರೆಗೆ, ಪತಿ ಮಹಮ್ಮದ್ ಮುಫೀಜ್ ಮಜೀದ್ ಠಾಕೂರ (ಎ-1), ಅತ್ತೆ ಮುನಿರಾ ಮಜೀದ್ ಠಾಕೂರ (ಎ-2), ಮಾವ ಮಜೀದ್ ಠಾಕೂರ (ಎ-3) ಹಾಗೂ ಸದಾಶಿವಗಡದ ಮಿಸ್ಬಾ ಅಷ್ಪಾಕ್ ಶೇಖ್ (ಎ-4) ವಿರುದ್ಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
2019ರ ಏಪ್ರಿಲ್ 18ರಂದು ಮುಸ್ಲಿಂ ಸಂಪ್ರದಾಯದಂತೆ ದಾಂಡೇಲಿಯ ಸಯ್ಯದ್ ಹಾಲ್ನಲ್ಲಿ ವಿವಾಹ ನಡೆದಿತ್ತು. ಮದುವೆಯಾದ ಒಂದು ತಿಂಗಳ ನಂತರದಿಂದಲೇ ಪತಿ ತನ್ನ ದೇಹದ ರೂಪವನ್ನು ಹೀಯಾಳಿಸುತ್ತಿದ್ದು, ಅತ್ತೆ ಹಾಗೂ ಮಾವ ಸಹ ಕ್ಷುಲ್ಲಕ ಕಾರಣಗಳಿಗೆ ಜಗಳವಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
2021ರಲ್ಲಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಸೂಕ್ತ ಆರೈಕೆ ಮಾಡದೇ, ಹಾಳಾದ ಆಹಾರ ನೀಡಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗಿದೆ. ಅಲ್ಲದೆ, ಪತಿ ಆಗಾಗ್ಗೆ ‘ತಲಾಖ್’ ನೀಡುವುದಾಗಿ ಬೆದರಿಕೆ ಹಾಕಿ ವಿಚ್ಛೇದನದ ಹೆಸರಿನಲ್ಲಿ ಭಯ ಹುಟ್ಟಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದಾಶಿವಗಡದ ಮಿಸ್ಬಾ ಅಷ್ಪಾಕ್ ಶೇಖ್ ಅವರು ದಾಂಡೇಲಿಗೆ ಬಂದಾಗಲೆಲ್ಲಾ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇನ್ನು 2026ರ ಫೆಬ್ರವರಿಯಿಂದ ಆರೋಪಿಗಳು ಮತ್ತಷ್ಟು ಕಿರುಕುಳ ನೀಡಿದ್ದು, ಜುಲೈ 19ರಂದು ಯಾವುದೇ ಕಾನೂನುಬದ್ಧ ಹಕ್ಕು ಅಥವಾ ಪರಿಹಾರ ಧನ ಕೇಳುವುದಿಲ್ಲ ಎಂಬ ಹೇಳಿಕೆಯನ್ನು ಬಲವಂತವಾಗಿ ಬರೆಯಿಸಿಕೊಂಡಿದ್ದಾರೆ. ಬಳಿಕ ಜುಲೈ 24ರಂದು ಪತ್ನಿ ಹಾಗೂ ಮಕ್ಕಳನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ದೂರಿನ ಆಧಾರದ ಮೇಲೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.