ಜಿಲ್ಲೆಯ ರೆಸಾರ್ಟ್/ಅಡ್ವೆಂಚರ್ ಸ್ಪೋರ್ಟ್ಸ್ ಬಗ್ಗೆ ಹುಟ್ಟಿದ ಆತಂಕ
ದಾಂಡೇಲಿ: ಸಾಹಸ ಕ್ರೀಡೆಯ ರೋಮಾಂಚ ಅನುಭವಿಸಲು ಹೋಗಿದ್ದ ಪ್ರವಾಸಿಗನೊಬ್ಬ, ಜಿಪ್ಲೈನ್ ಬೆಲ್ಟ್ ಹರಿದು ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರೆಸಾರ್ಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಜಯಪುರದ ಗ್ಯಾಂಗವಾಡಿ ನಿವಾಸಿ ಕುಬೇರ ರಮೇಶ ಸುರಪುರ (40) ನೀಡಿದ ದೂರಿನ ಮೇರೆಗೆ, ಸ್ಟಾರ್ಲಿಂಗ್ ರೆಸಾರ್ಟ್ನ ಮಾಲೀಕರಾದ ಉಸ್ಮಾನ ವಹಾಬ್, ರಾಘವೇಂದ್ರ ಶೆಟ್ಟಿ ಹಾಗೂ ಪವನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜುಲೈ 3ರಂದು ಕುಬೇರ ಅವರು ತಮ್ಮ ಅಣ್ಣ ಪ್ರಶಾಂತ ಸುರಪುರ ಅವರೊಂದಿಗೆ ದಾಂಡೇಲಿಯ ಸ್ಟಾರ್ಲಿಂಗ್ ರೆಸಾರ್ಟ್ಗೆ ತೆರಳಿದ್ದರು. ಸಂಜೆ ಸುಮಾರು 5.25ಕ್ಕೆ ರೆಸಾರ್ಟ್ನಲ್ಲಿದ್ದ ಜಿಪ್ಲೈನ್ ಸಾಹಸ ಕ್ರೀಡೆಯಲ್ಲಿ ಭಾಗವಹಿಸಿದ್ದ ವೇಳೆ, ಅವರ ಸೊಂಟಕ್ಕೆ ಕಟ್ಟಿದ್ದ ಸುರಕ್ಷತಾ ಬೆಲ್ಟ್ ಏಕಾಏಕಿ ಹರಿದಿದ್ದು, ಅವರು ಸುಮಾರು 40 ಅಡಿ ಕೆಳಗೆ ನೆಲಕ್ಕೆ ಬಿದ್ದಿದ್ದಾರೆ.
ಬಿದ್ದ ರಭಸಕ್ಕೆ ಎರಡೂ ಕೈಗಳು ಹಾಗೂ ಕಾಲುಗಳಿಗೆ ತೀವ್ರ ಸ್ವರೂಪದ ಮುರಿತದ ಗಾಯಗಳಾಗಿದ್ದು, ಹೆಲ್ಮೆಟ್ನ ಕ್ಲಿಪ್ ಕುತ್ತಿಗೆಗೆ ತಾಗಿ ಗಾಯವಾಗಿದೆ. ಕೂಡಲೇ ಅಣ್ಣ ಖಾಸಗಿ ವಾಹನದಲ್ಲಿ ದಾಂಡೇಲಿಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಹಾಗೂ ಮಿರಜ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ರೆಸಾರ್ಟ್ನಲ್ಲಿ ಸಾಹಸ ಕ್ರೀಡೆಗೆ ಬಳಸುವ ಯಂತ್ರೋಪಕರಣಗಳನ್ನು ಸರಿಯಾಗಿ ನಿರ್ವಹಿಸದೆ, ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.