ಯಲ್ಲಾಪುರ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಶಿಕ್ಷಣದ ಅಗತ್ಯ ಸಾಮಗ್ರಿಗಳನ್ನು ಒದಗಿಸುವ ಮೂಲಕ ಯಲ್ಲಾಪುರದ ಧಾತ್ರಿ ಫೌಂಡೇಷನ್ ಹಲವು ವರ್ಷಗಳಿಂದ ಸಾಮಾಜಿಕ ಕಾಳಜಿಯ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಉದ್ಯಮಿ ಹಾಗೂ ಧಾತ್ರಿ ಫೌಂಡೇಷನ್ನ ಮಾಲಕ ಶ್ರೀನಿವಾಸ ಭಟ್ ಧಾತ್ರಿ ಅವರ ಮುತುವರ್ಜಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ಕೆ ಗ್ರಾಮೀಣ ಭಾಗದ ಶಾಲೆಗಳು ಹಾಗೂ ಮಕ್ಕಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಕ್ಕಳ ಶಿಕ್ಷಣಕ್ಕೆ ಸಣ್ಣದೊಂದು ನೆರವು ನೀಡಿದರೂ ಅದು ಅವರ ಭವಿಷ್ಯ ರೂಪಿಸುವಲ್ಲಿ ದೊಡ್ಡ ಕೊಡುಗೆಯಾಗಬಹುದು ಎಂಬ ಆಶಯದೊಂದಿಗೆ ಶ್ರೀನಿವಾಸ ಭಟ್ ಧಾತ್ರಿ ಅವರು ಈ ಕಾರ್ಯವನ್ನು ಉತ್ಸಾಹದಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಇದೇ ಸರಣಿಯಲ್ಲಿ ತಾಲೂಕಿನ ಮಾಗೋಡ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೂ ಉಚಿತವಾಗಿ ಪಟ್ಟಿಗಳನ್ನು ವಿತರಿಸಲಾಯಿತು. ಶ್ರೀನಿವಾಸ ಭಟ್ ಅವರ ಅನುಪಸ್ಥಿತಿಯಲ್ಲಿ ವೆಂಕಟ್ರಮಣ ಭಟ್ ಕಿರಕುಂಬತ್ತಿ ಹಾಗೂ ಸುಬ್ಬಣ್ಣ ಉದ್ದಾಬೈಲ್ ಅವರು ಶಾಲೆಗೆ ಆಗಮಿಸಿ ಮಕ್ಕಳಿಗೆ ಪಟ್ಟಿಗಳನ್ನು ವಿತರಿಸಿದರು.
ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಇಂತಹ ಪ್ರಯತ್ನಗಳು ಕೇವಲ ವಸ್ತುಗಳ ವಿತರಣೆಗೆ ಸೀಮಿತವಾಗದೆ, ಮಕ್ಕಳಲ್ಲಿ ‘ನಮ್ಮ ಶಿಕ್ಷಣದ ಬಗ್ಗೆ ಕಾಳಜಿ ವಹಿಸುವವರಿದ್ದಾರೆ’ ಎಂಬ ಆತ್ಮವಿಶ್ವಾಸವನ್ನೂ ಮೂಡಿಸುತ್ತವೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಅಗತ್ಯಗಳನ್ನು ಗುರುತಿಸಿ, ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಹಲವು ವರ್ಷಗಳಿಂದ ನೆರವು ನೀಡುತ್ತಿರುವ ಧಾತ್ರಿ ಫೌಂಡೇಷನ್ನ ಕಾರ್ಯ ಶ್ಲಾಘನೀಯವಾಗಿದೆ.
ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸುವ ಮೂಲಕ ಶಿಕ್ಷಣಕ್ಕೆ ಬೆಂಬಲವಾಗಿ ನಿಂತಿರುವ ಶ್ರೀನಿವಾಸ ಭಟ್ ಧಾತ್ರಿ ಹಾಗೂ ಈ ಕಾರ್ಯಕ್ಕೆ ಸಹಕರಿಸುತ್ತಿರುವ ವೆಂಕಟ್ರಮಣ ಭಟ್ ಕಿರಕುಂಬತ್ತಿ ಮತ್ತು ಸುಬ್ಬಣ್ಣ ಉದ್ದಾಬೈಲ್ ಅವರಿಗೆ ಶಾಲೆಯ ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಮಂಡಳಿ ಹಾಗೂ ಪಾಲಕರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಸದಸ್ಯ ಗುರುಪ್ರಸಾದ ಭಾಗ್ವತ, ಮುಖ್ಯ ಶಿಕ್ಷಕಿ ಶಶಿಕಲಾ ಗಾಂವ್ಕರ, ಶೈಲಾ ಹೆಗಡೆ, ವಿನಾಯಕ ಗಾಂವ್ಕರ, ಅಶ್ವಿನಿ ಹೊಂಬರಡಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.