ಯಲ್ಲಾಪುರ: 1975ರ ಜೂನ್ 26ರಂದು ದೇಶದ ಮೇಲೆ ಹೇರಲಾದ ತುರ್ತು ಪರಿಸ್ಥಿತಿಗೆ ಇಂದು 51 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ಆ ಕಾಲದ ನೆನಪುಗಳನ್ನು ಹಂಚಿಕೊಂಡಿರುವ ಅಂದಿನ ತುರ್ತು ಪರಿಸ್ಥಿತಿಯ ಬಂಧಿಯಾಗಿದ್ದ ರಾಮು ನಾಯ್ಕ, ಇಂದಿನ ಗ್ಯಾರಂಟಿ ಯೋಜನೆಗಳನ್ನು ವ್ಯಂಗ್ಯವಾಗಿ ಉಲ್ಲೇಖಿಸಿ ಅಂದಿನ ದಿನಗಳನ್ನು ಸ್ಮರಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಹೊಸದೇನಲ್ಲ. ಅವುಗಳ ಆರಂಭವೇ 50 ವರ್ಷಗಳ ಹಿಂದೆ, ಇಂದಿರಾ ಗಾಂಧಿಯವರ ಆಡಳಿತಾವಧಿಯಲ್ಲಿ ಆಗಿತ್ತು ಎಂದು ಅವರು ವ್ಯಂಗ್ಯವಾಗಿ ಹೇಳಿದ್ದಾರೆ.
ತುರ್ತು ಪರಿಸ್ಥಿತಿ ಘೋಷಣೆಯಾದ ಬಳಿಕ ಸರ್ಕಾರವನ್ನು ಟೀಕಿಸಿದವರು, ಪ್ರತಿಭಟನೆಯಲ್ಲಿ ಭಾಗವಹಿಸಿದವರು ಹಾಗೂ ವಿರೋಧದ ಧ್ವನಿ ಎತ್ತಿದವರು ಬಂಧನಕ್ಕೊಳಗಾಗುತ್ತಿದ್ದರು. ವಾಕ್ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಲಾಗಿತ್ತು. ಸಂಘಟನೆಗಳ ಮೇಲೆ ನಿಷೇಧ ವಿಧಿಸಲಾಗಿತ್ತು. ಪ್ರಜಾಪ್ರಭುತ್ವದ ಮೌಲ್ಯಗಳು ಸಂಕಷ್ಟಕ್ಕೆ ಸಿಲುಕಿದ್ದವು.
ಆ ಕಾಲದ ಅನುಭವವನ್ನು ವ್ಯಂಗ್ಯದ ಭಾಷೆಯಲ್ಲಿ ವಿವರಿಸಿರುವ ಅವರು, ಪ್ರತಿಭಟನಾಕಾರರಿಗೆ ಉಚಿತ ‘ಜೈಲು ಗ್ಯಾರಂಟಿ’, ಪೊಲೀಸರ ‘ಲಾಠಿ ಭಾಗ್ಯ’, ಜೈಲಿನ ‘ಅನ್ನಭಾಗ್ಯ’, ಅನಾರೋಗ್ಯಕ್ಕೊಳಗಾದವರಿಗೆ ‘ಔಷಧಿ ಭಾಗ್ಯ’ ಮತ್ತು ಕೊನೆಗೆ ‘ದಫನ್ ಭಾಗ್ಯ’ ಕೂಡ ಲಭ್ಯವಿತ್ತು ಎಂದು ಹೇಳಿದ್ದಾರೆ.
ದೇಶದಾದ್ಯಂತ ಲಕ್ಷಾಂತರ ಜನರು ತುರ್ತು ಪರಿಸ್ಥಿತಿಯ ಪರಿಣಾಮ ಅನುಭವಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜೈಲಿನಲ್ಲೇ ಸಾವಿರಾರು ಹೋರಾಟಗಾರರು ಬಂಧನಕ್ಕೊಳಗಾಗಿದ್ದರು. ಆ ದಿನಗಳಲ್ಲಿ ಜೊತೆಗಿದ್ದ ಅನೇಕ ಹೋರಾಟಗಾರರು ಈಗ ಎಲ್ಲಿದ್ದಾರೆ ಎಂಬುದೂ ಗೊತ್ತಿಲ್ಲ. ಕೆಲವರ ಮುಖಗಳೂ ನೆನಪಿನಿಂದ ಮಾಸಿವೆ. ಆದರೆ ಜೂನ್ 26 ಬಂದಾಗಲೆಲ್ಲ ತುರ್ತು ಪರಿಸ್ಥಿತಿಯ ಕರಾಳ ದಿನಗಳು ಮತ್ತು ಜೈಲು ಜೀವನದ ನೆನಪುಗಳು ಮತ್ತೆ ಕಣ್ಮುಂದೆ ಬರುತ್ತವೆ ಎಂದು ರಾಮು ನಾಯ್ಕ ಸ್ಮರಿಸಿದ್ದಾರೆ.