ಅಂಕೋಲಾ: ತಾಲೂಕಿನ ಪ್ಲೈಓವರ್ ಸಮೀಪ ಶ್ರೀಕುಮಾರ್ ಸರಕು ಸಾಗಣೆ ಕ್ಯಾಂಟರ್ ಹಾಗೂ ಸ್ವಿಫ್ಟ್ ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ಗಾಯಗೊಂಡಿದ್ದು, ಇಬ್ಬರೂ ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಕ್ಯಾಂಟರ್ ವಾಹನ (ಕೆಎ-47/ಎ-0506) ಚಾಲಕ ಮಹೇಶ್ ಯಾವುದೇ ಸೂಚನೆ ನೀಡದೇ ಏಕಾಏಕಿ ಬಾಳೆಗುಳಿಯಿಂದ ಯಲ್ಲಾಪುರ ಕಡೆಗೆ ವಾಹನ ತಿರುಗಿಸಿದ್ದು, ಇದೇ ವೇಳೆ ಸ್ವಿಫ್ಟ್ ಕಾರು (ಜಿಎ-08/ಇ-8357) ಚಾಲಕ ಸೃಜನ ಅವರು ಸಹ ಅತಿವೇಗದಲ್ಲಿ ವಾಹನ ಚಲಾಯಿಸುತ್ತಿದ್ದ ಕಾರಣ ಕಾರು ಕ್ಯಾಂಟರ್ನ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಸಾತ್ವಿಕ, ವಿನಾಯಕ, ಅಬ್ದುಲ್ ಹಾಗೂ ಪ್ರತಾಪ್ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಕಾರು ಚಾಲಕ ಸೃಜನ ಅವರಿಗೂ ಗಾಯಗಳಾಗಿವೆ.
ಎರಡೂ ವಾಹನಗಳ ಚಾಲಕರು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.