Saturday, May 30, 2026
HomeLocal Newsಮೇ 24ಕ್ಕೆ ದೆಹಲಿಯಲ್ಲಿ ಗಿರಿಜನರ ಮಹಾಸಮಾಗಮ

ಮೇ 24ಕ್ಕೆ ದೆಹಲಿಯಲ್ಲಿ ಗಿರಿಜನರ ಮಹಾಸಮಾಗಮ

ಯಲ್ಲಾಪುರ: ವನವಾಸಿ ಗಿರಿಜನರ ಸಂಸ್ಕೃತಿ, ಪರಂಪರೆ ಹಾಗೂ ಹಕ್ಕುಗಳ ರಕ್ಷಣೆಯ ಉದ್ದೇಶದಿಂದ ಮೇ 24ರಂದು ನವದೆಹಲಿಯ ಕೆಂಪುಕೋಟೆ ಸಮೀಪ ʻಗಿರಿಜನರ ಸಾಂಸ್ಕೃತಿಕ ಸಮಾಗಮʼ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವನವಾಸಿ ಕಲ್ಯಾಣದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶಾಂತಾರಾಮ ಸಿದ್ದಿ ತಿಳಿಸಿದರು.

ಪಟ್ಟಣದ ಜೀವನ ವಿಕಾಸ ಟ್ರಸ್ಟ್ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಮಹಾನ್ ಜನನಾಯಕ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿ ವರ್ಷದ ಅಂಗವಾಗಿ ನಡೆಯುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ದೇಶದಾದ್ಯಂತದ ಸುಮಾರು 550ಕ್ಕೂ ಹೆಚ್ಚು ಜನಜಾತಿಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 2ರಿಂದ 3 ಲಕ್ಷಕ್ಕೂ ಅಧಿಕ ಗಿರಿಜನ ಸಮುದಾಯದ ಜನರು ಸೇರುವ ನಿರೀಕ್ಷೆಯಿದ್ದು, ಕರ್ನಾಟಕದಿಂದ ಸುಮಾರು 1250 ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಭವ್ಯ ಸಾಂಸ್ಕೃತಿಕ ಶೋಭಾಯಾತ್ರೆ ನಡೆಯಲಿದ್ದು, ದೆಹಲಿಯ ಐದು ವಿಭಿನ್ನ ಸ್ಥಳಗಳಿಂದ ಆರಂಭವಾಗುವ ಶೋಭಾಯಾತ್ರೆಗಳು ಕೆಂಪುಕೋಟೆ ಆವರಣದಲ್ಲಿ ಒಂದಾಗಲಿವೆ ಎಂದು ಹೇಳಿದರು.

ಸಂಜೆ 6 ಗಂಟೆಗೆ ನಡೆಯುವ ಮಹಾಸಭೆಯಲ್ಲಿ ವಿವಿಧ ರಾಜ್ಯಗಳ ಗಿರಿಜನ ಪ್ರತಿನಿಧಿಗಳು, ಸಾಧಕರು ಹಾಗೂ ಮುಖಂಡರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ಕೇಂದ್ರ ಗೃಹ ಸಚಿವ Amit Shah ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಪ್ರದರ್ಶನಗಳು, ಪಾರಂಪರಿಕ ಕಲಾ ಪ್ರದರ್ಶನಗಳು ಹಾಗೂ ಸಮುದಾಯದ ಸಹಭಾಗಿತ್ವದ ವಿವಿಧ ಕಾರ್ಯಕ್ರಮಗಳು ಆಯೋಜನೆಯಾಗಲಿದ್ದು, ದೆಹಲಿಯ ವಿವಿಧ ಸ್ಥಳಗಳಲ್ಲಿ ವಸತಿ, ಆಹಾರ, ನೀರು, ಸಾರಿಗೆ, ವೈದ್ಯಕೀಯ ಮತ್ತು ಸ್ವಚ್ಛತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಉದ್ದೇಶಕ್ಕಾಗಿ 20 ವಿಭಾಗಗಳು ಹಾಗೂ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗಿರಿಜನ ಸುರಕ್ಷಾ ರಾಜ್ಯ ಸಂಯೋಜಕ ದೋಂಡು ಪಾಟೀಲ್ ಹಾಗೂ ಜಿಲ್ಲಾ ಸಂಯೋಜಕ ಸಿದ್ದು ಜೋರೆ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share