ಶಿರಸಿ: ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಜನಜಂಗುಳಿಯ ನಡುವೆ ಮಹಿಳೆಯೊಬ್ಬರ ಬ್ಯಾಗ್ನಿಂದ ₹1.59 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್ ಫೋನ್ ಹಾಗೂ ನಗದು ಹಣ ಕಳ್ಳತನವಾಗಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕಲಗೋಡ ಗ್ರಾಮದ ನಿವಾಸಿ ಸವಿತಾ ಆನಂದ ನಾಯ್ಕ ಅವರು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜೂನ್ 3ರಂದು ಮಧ್ಯಾಹ್ನ ತಮ್ಮ ಮಗ ಧೀರಜ್, ಅಕ್ಕ ನಾಗರತ್ನ ಹಾಗೂ ಅಕ್ಕನ ಮಗಳೊಂದಿಗೆ ಯಲ್ಲಾಪುರ-ಮುಂಡಗೋಡ ರಸ್ತೆಯ ಅಡಿಕೆಸರ ಗ್ರಾಮದಿಂದ ಶಿರಸಿಗೆ ಬಂದಿದ್ದರು. ಶಿರಸಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಅಕ್ಕ ನಾಗರತ್ನ ಅವರಿಗೆ ಬನವಾಸಿ ಬಸ್ ಹತ್ತಿಸಿದ ಬಳಿಕ ಬಸ್ ನಿಲ್ದಾಣದ ಒಳಗೆ ಕುಳಿತಿದ್ದರು.
ನಂತರ ಮಗನಿಗೆ ತಿಂಡಿ ಕೊಡಿಸಲು ಬಸ್ ನಿಲ್ದಾಣದ ಬೇಕರಿಗೆ ತೆರಳಿದ್ದು, ಹಣ ಪಾವತಿಸಲು ವೆನಿಟಿ ಬ್ಯಾಗ್ ತೆರೆಯುವ ವೇಳೆ ಅದರಲ್ಲಿದ್ದ ಸ್ಟೀಲ್ ಬಾಕ್ಸ್ ಕಾಣೆಯಾಗಿರುವುದು ಗೊತ್ತಾಗಿದೆ. ಅದರಲ್ಲಿ ಚಿನ್ನಾಭರಣ, ಮೊಬೈಲ್ ಹಾಗೂ ನಗದು ಹಣ ಇಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳುವಾದ ವಸ್ತುಗಳಲ್ಲಿ ಸುಮಾರು 20 ಗ್ರಾಂ ತೂಕದ ಚಿನ್ನದ ಸರ, 10 ಗ್ರಾಂ ತೂಕದ ಕಿವಿಯ ಬೆಂಡೋಲೆ, ಸರಪಳಿ ಹಾಗೂ ಮಾಟಿ, ಕೀಪ್ಯಾಡ್ ಮೊಬೈಲ್ ಮತ್ತು 8,000 ನಗದು ಸೇರಿದ್ದು, ಒಟ್ಟು ಮೌಲ್ಯ ₹1.59 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.