ಯಲ್ಲಾಪುರ: ಅತಿವೇಗ ಮತ್ತು ಅಜಾಗರೂಕ ಚಾಲನೆಯೇ ಮತ್ತೊಂದು ಗಂಭೀರ ರಸ್ತೆ ಅಪಘಾತಕ್ಕೆ ಕಾರಣವಾಗಿರುವ ಘಟನೆ ಯಲ್ಲಾಪುರ ತಾಲೂಕಿನ ಕನ್ನೂರ ಬಸ್ ನಿಲ್ದಾಣದ ಸಮೀಪ ಬೆಳಕಿಗೆ ಬಂದಿದೆ.
ಗೂಡ್ಸ್ ರಿಕ್ಷಾ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 20ರಂದು ಬೆಳಿಗ್ಗೆ 10.15ರ ಸುಮಾರಿಗೆ ಹೆಮ್ಮಾಡಿ ಕಡೆಯಿಂದ ಮಾವಿನಕಟ್ಟಾ ಕಡೆಗೆ ಕೆಎ-31/ಎ-5315 ಸಂಖ್ಯೆಯ ಗೂಡ್ಸ್ ರಿಕ್ಷಾವನ್ನು ಚಾಲಕ ಸುದೀಪ ಉಡಚಪ್ಪ ಭಗವೆ (22), ರಾಜೀವನಗರ, ಶಿರಸಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿ, ಕನ್ನೂರ ಬಸ್ ನಿಲ್ದಾಣದ ಬಳಿ ಕೆಎ-31/ಆರ್-5882 ಸಂಖ್ಯೆಯ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಗಂಗಾಧರ ನಾರಾಯಣ ಬಾಂದೆ ಅವರ ಬಲಗಾಲಿನ ಮೊಣಕಾಲು, ಬಲ ಭುಜಕ್ಕೆ ಗಾಯಗಳಾಗಿದ್ದು, ಬಲ ಕೈಯ ತೋರುಬೆರಳಿನ ಮೂಳೆ ಹಾಗೂ ಎದೆಯ ಎರಡು ಮೂಳೆಗಳು ಮುರಿದಿವೆ. ಬೈಕ್ನ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರೇಮಾ ಬಾಂದೆ ಅವರ ಬಲ ತೊಡೆ, ಮೊಣಕಾಲು ಹಾಗೂ ಬಲ ಕೈಯ ಕಿರುಬೆರಳಿನ ಮೂಳೆಗಳೂ ಮುರಿದು ಗಂಭೀರ ಗಾಯಗಳಾಗಿವೆ.
ಗಾಯಾಳುಗಳನ್ನು ಮೊದಲಿಗೆ ಶಿರಸಿಯ ಪಂಡಿತ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್. ಹೆಗಡೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳ ಆರೈಕೆಯಲ್ಲಿ ನಿರತರಾಗಿದ್ದ ಕಾರಣ ದೂರು ದಾಖಲಿಸಲು ವಿಳಂಬವಾಗಿದೆ ಎಂದು ದೂರುದಾರ ವಿರೇಂದ್ರ ಗಂಗಾಧರ ಬಾಂದೆ ಪೊಲೀಸರಿಗೆ ತಿಳಿಸಿದ್ದಾರೆ.