ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಸುರಕ್ಷಿತ ರಕ್ಷಣಾ ಕಾರ್ಯಾಚರಣೆ
ಯಲ್ಲಾಪುರ: ತಾಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಾವಳ್ಳಿ ಗ್ರಾಮದ ಅಡಿಕೆ ತೋಟವೊಂದರಲ್ಲಿ ಸುಮಾರು 11.5 ಅಡಿ ಉದ್ದ ಹಾಗೂ ಅಂದಾಜು 20–22 ಕೆಜಿ ತೂಕದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಮತ್ತು ಉರಗ ಸಂರಕ್ಷಕರ ತಂಡ ಯಶಸ್ವಿಯಾಗಿ ರಕ್ಷಿಸಿ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದೆ.
ವಲಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಗಸ್ತು ಅರಣ್ಯ ಪಾಲಕರು ಹಾಗೂ ಉರಗ ಸಂರಕ್ಷಕರಾದ ರಮೇಶ್ ಬಡಿಗೇರ, ಲಕ್ಷ್ಮಣ ಪಮ್ಮಾರ್ ಮತ್ತು ಪಾಂಡುರಂಗ ಮಪ್ಸೆಕರ್ ಅವರು ಗ್ರಾಮಸ್ಥರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದರು.
ಯಾವುದೇ ತೊಂದರೆಯಾಗದಂತೆ ಹೆಬ್ಬಾವನ್ನು ಹಿಡಿದು ಬಳಿಕ ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲಾಯಿತು.ಕಾರ್ಯಾಚರಣೆಯ ವೇಳೆ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಗರಬಗುಡಿ ಉಪಸ್ಥಿತರಿದ್ದರು.
ಗ್ರಾಮಸ್ಥರಾದ ವಿಘ್ನೇಶ್ವರ ಹೆಗಡೆ, ಮಹಾಬಲೇಶ್ವರ ಹೆಗಡೆ, ಶೇಷಗಿರಿ ಹೆಗಡೆ, ಗಣಪತಿ ಹೆಗಡೆ, ಕುಮಾರ್ ಮರಾಠಿ, ನಾಗರಾಜ ಹೆಗಡೆ ಹಾಗೂ ತರುಣ್ ಹೆಗಡೆ ಮುಂತಾದವರು ಕಾರ್ಯಾಚರಣೆಗೆ ಸಹಕರಿಸಿದರು.
ರಕ್ಷಣಾ ಕಾರ್ಯಾಚರಣೆಯ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಗ್ರಾಮಸ್ಥರಿಗೆ ಹಾವುಗಳ ಮಹತ್ವ, ಅವುಗಳನ್ನು ಕಂಡಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು ಹಾಗೂ ಹಾವುಗಳನ್ನು ಹಾನಿಗೊಳಿಸದೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವ ಅಗತ್ಯತೆ ಕುರಿತು ಜಾಗೃತಿ ಮೂಡಿಸಿದರು.