ಹೊನ್ನಾವರ: ಮನೆಯ ಬಳಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಆರೋಪದ ಮೇರೆಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಸೂರಖಾನ ಗಲ್ಲಿಯ ಇಸ್ಮಾಯಿಲ್ ತಂದೆ ಹುಸೇನ ಶೇಖ್ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ರಾಮತೀರ್ಥದ ಸುಬೇದುಲ್ಲಾ ಬಾಬು ಶೇಖ್, ಅಸೂರಖಾನ ಗಲ್ಲಿಯ ಪೈಜಾನ ಸತ್ತಾರ ಶೇಖ್ ಹಾಗೂ ಹೊನ್ನಾವರ ಗಾಂಧಿನಗರದ ಅರ್ಪಾತ್ ಇಮ್ತಿಯಾಜ್ ಶೇಖ್ ಆರೋಪಿತರಾಗಿದ್ದಾರೆ.
ಜುಲೈ 19ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ದೂರುದಾರರ ಪರಿಚಯದ ವ್ಯಕ್ತಿಯಾಗಿರುವ 1ನೇ ಆರೋಪಿ ಸುಬೇದುಲ್ಲಾ ಬಾಬು ಶೇಖ್ ಅವರ ಮನೆಯ ಸಮೀಪ ಮಾವಿನಹಣ್ಣು ವ್ಯಾಪಾರಕ್ಕಾಗಿ ಬಂದಿದ್ದ. ಈ ಸಂದರ್ಭದಲ್ಲಿ ದೂರುದಾರರು ಆತನೊಂದಿಗೆ ಮಾವಿನಹಣ್ಣಿನ ಕುರಿತು ಮಾತನಾಡಿದ್ದು, ಉತ್ತಮ ಹಣ್ಣುಗಳನ್ನು ನೀಡುವಂತೆ ತಿಳಿಸಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಚರ್ಚೆಯೂ ನಡೆದಿತ್ತು.
ಬಳಿಕ ಸುಬೇದುಲ್ಲಾ ಬಾಬು ಶೇಖ್ ಅಲ್ಲಿಂದ ತೆರಳಿದ್ದು, ಸುಮಾರು 3 ಗಂಟೆಯ ವೇಳೆಗೆ ಇನ್ನುಳಿದ ಆರೋಪಿತರೂ ದೂರುದಾರರ ಮನೆಯ ಸಮೀಪ ಬಂದು, ಹೊರಗಿದ್ದ ದೂರುದಾರರ ತಂದೆಯನ್ನು ಕೈಯಿಂದ ದೂಡಿ ಹಾಕಿದ್ದಾರೆ ಎನ್ನಲಾಗಿದೆ.
ಈ ವೇಳೆ ಏಕೆ ಹೊಡೆಯುತ್ತೀರಿ ಎಂದು ಪ್ರಶ್ನಿಸಿದಾಗ ಪೈಜಾನ ಸತ್ತಾರ ಶೇಖ್ ಕೈಯಿಂದ ಎಡಕಣ್ಣಿನ ಮೇಲೆ ಹೊಡೆದಿದ್ದು, ಬಳಿಕ ತಂಟೆಗೆ ಬಂದರೆ ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿ ತೆರಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.