ಹೊನ್ನಾವರ: ಕಟ್ಟಡ ಕಾಮಗಾರಿ ವೇಳೆ ನಡೆದ ದುರ್ಘಟನೆಯಲ್ಲಿ ಕಾರ್ಮಿಕನೊಬ್ಬ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟ ಘಟನೆ ಹೊನ್ನಾವರ ತಾಲೂಕಿನ ಹಳದಿಪುರ ಸಮೀಪದ ಬಡಗಣಿ ಅಗ್ರಹಾರದಲ್ಲಿ ನಡೆದಿದೆ.
ಮೃತರನ್ನು ರಾಘವೇಂದ್ರ ಗಣಪು ಗೌಡ(45) ಕಟ್ಟಡ ಕಾಮಗಾರಿಯಲ್ಲಿ ತೊಡಗಿದ್ದ ಗಾವಡಿ ಕೆಲಸಗಾರ ಎಂದು ಗುರುತಿಸಲಾಗಿದೆ.
ಏಪ್ರಿಲ್ 28ರಂದು ಹೊನ್ನಾವರ ಪಟ್ಟಣದ ಜೋಗಮಠದಲ್ಲಿರುವ ಡಿ.ವಿ. ಕಾಮತ್ ಅವರ ಮನೆ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಧ್ಯಾಹ್ನ ಸುಮಾರು 3:05ರ ಸುಮಾರಿಗೆ ಕಿಟಕಿ ಗ್ರಿಲ್ ಕತ್ತರಿಸುವ ವೇಳೆ ಬಳಸುತ್ತಿದ್ದ ಕಟರ್ ಯಂತ್ರದ ಬ್ಲೇಡ್ ತುಂಡಾಗಿ, ರಾಘವೇಂದ್ರ ಅವರ ಕುತ್ತಿಗೆ ಮತ್ತು ಗದ್ದ ಭಾಗಕ್ಕೆ ಬಡಿದು ಗಂಭೀರ ಗಾಯ ಉಂಟಾಗಿತ್ತು.
ತಕ್ಷಣ ಅವರನ್ನು ಹೊನ್ನಾವರದ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆ ಉಸಿರಾಟದ ಸಮಸ್ಯೆ ಉಂಟಾದ ಹಿನ್ನೆಲೆ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಮೃತರು ಮಧ್ಯಾಹ್ನ 3:40ರಿಂದ ಸಂಜೆ 4:30ರ ನಡುವಿನ ಅವಧಿಯಲ್ಲಿ ಗಂಭೀರ ಗಾಯಗಳಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.