ಯಲ್ಲಾಪುರ: ‘ಹರ್ ಘರ್ ತಿರಂಗಾ’ ಅಭಿಯಾನ ಎಂದರೆ ಕೇವಲ ಆಗಸ್ಟ್ 15ರ ದಿನ ಮನೆಯ ಮೇಲೆ ಧ್ವಜ ಹಾರಿಸುವ ಕಾರ್ಯಕ್ರಮವಷ್ಟೇ ಅಲ್ಲ. ದೇಶದ ಮೇಲಿನ ಗೌರವವನ್ನು ಮುಂದಿನ ಪೀಳಿಗೆಗೂ ತಲುಪಿಸುವ ಒಂದು ಪ್ರಯತ್ನ. ಕಳಚೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ತಮ್ಮ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಪ್ರೇಮವನ್ನು ವ್ಯಕ್ತಪಡಿಸುತ್ತಿರುವ ಪ್ರಮೋದ್ ಹೆಬ್ಬಾರ್ ಅವರ ನಡೆ ಇದಕ್ಕೆ ಸಾಕ್ಷಿಯಾಗಿದೆ.
ಕಳಚೆ ಪ್ರೀಮಿಯರ್ ಲೀಗ್ ಕ್ರೀಡಾ ಚಟುವಟಿಕೆಯ ರೂವಾರಿಯಾಗಿ ಹಾಗೂ ತಮ್ಮದೇ ಆದ ಸಂಘಟನಾ ಶಕ್ತಿಯ ಮೂಲಕ ಗುರುತಿಸಿಕೊಂಡಿರುವ ಪ್ರಮೋದ್ ಹೆಬ್ಬಾರ್ ಅವರು ಸತತ ನಾಲ್ಕು ವರ್ಷಗಳಿಂದ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ತಮ್ಮ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸಿ ಧ್ವಜವಂದನೆ ಸಲ್ಲಿಸುತ್ತಿದ್ದಾರೆ.
ಈ ಬಾರಿಯೂ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ಗೌರವ ಸಲ್ಲಿಸಿರುವ ಅವರು, ದೇಶಪ್ರೇಮ ಬಾಲ್ಯದಿಂದಲೇ ಮಕ್ಕಳಲ್ಲಿ ಬೆಳೆಯಬೇಕು. ಅದಕ್ಕಾಗಿ ಮೊದಲ ಹೆಜ್ಜೆ ಮನೆಯಿಂದಲೇ ಆರಂಭವಾಗಬೇಕು ಎಂಬ ಸಂದೇಶ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಕಳಚೆಯ ಪುಟಾಣಿ ದೀಕ್ಷಾ ರಾಘವೇಂದ್ರ ಭಟ್ಟ ಸೂತ್ರೆ ಸೇರಿದಂತೆ ಮಕ್ಕಳು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ದೇಶಪ್ರೇಮ ಮೆರೆದಿರುವುದು ಗಮನ ಸೆಳೆದಿದೆ. ಪುಟಾಣಿ ಮಕ್ಕಳ ಈ ನಡೆ ಸುತ್ತಮುತ್ತಲಿನವರ ಮೆಚ್ಚುಗೆಗೂ ಪಾತ್ರವಾಗಿದೆ.
ʻಬಾಲ್ಯದಿಂದಲೇ ಮಕ್ಕಳಲ್ಲಿ ದೇಶಪ್ರೇಮ ಮೂಡಿಸುವ ಕಾರ್ಯವನ್ನು ಪಾಲಕರು ಮಾಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯʼ ಎಂದು ಪ್ರಮೋದ್ ಹೆಬ್ಬಾರ್ ಅಭಿಪ್ರಾಯಪಟ್ಟಿದ್ದಾರೆ.
ಮನೆಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶದ ಮೇಲಿನ ಗೌರವವನ್ನು ವ್ಯಕ್ತಪಡಿಸುವ ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಮಕ್ಕಳೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದ್ದು, ಕಳಚೆಯಲ್ಲಿ ದೇಶಪ್ರೇಮದ ಬಣ್ಣ ಮತ್ತಷ್ಟು ಗಾಢವಾಗುತ್ತಿದೆ.