ಯಲ್ಲಾಪುರ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇಂದು ಪ್ರಮುಖ ಸವಾಲು ಪ್ರತಿಪಕ್ಷಗಳಿಂದಲ್ಲ, ಸ್ವಪಕ್ಷದ ನಾಯಕರಿಂದಲೇ ಎದುರಾಗುತ್ತಿದೆ ಎಂದು ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರದ ಸಚಿವ ಸಂಪುಟ ರಚನೆಯಾದಾಗಲೇ ಸರ್ಕಾರದ ಸ್ಥಿರತೆ ಕುರಿತು ಅನುಮಾನ ಮೂಡಿತ್ತು. ಇಷ್ಟೊಂದು ಅತಿರಥ-ಮಹಾರಥರನ್ನು ಒಂದೇ ವೇದಿಕೆಯಲ್ಲಿ ಹಿಡಿದಿಟ್ಟುಕೊಂಡು ಸಾಗುವುದು ಸುಲಭದ ಕೆಲಸವಲ್ಲ ಎಂಬುದು ಈಗಿನ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ.
ಒಂದು ಕಡೆ ಹಿರಿಯ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಎಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ ಹಾಗೂ ಕೆ.ಜೆ. ಜಾರ್ಜ್ ಅವರ ಹೇಳಿಕೆಗಳು ಚರ್ಚೆಗೆ ಗ್ರಾಸವಾಗುತ್ತಿದ್ದರೆ, ಮತ್ತೊಂದೆಡೆ ಸಚಿವ ಸ್ಥಾನದಿಂದ ವಂಚಿತರಾದ ಹೆಚ್.ಕೆ. ಪಾಟೀಲ, ಎಚ್.ಸಿ. ಮಹದೇವಪ್ಪ, ಟಿ.ಬಿ. ಜಯಚಂದ್ರ, ಕೆ.ಎನ್. ರಾಜಣ್ಣ, ಆರ್.ವಿ. ದೇಶಪಾಂಡೆ ಹಾಗೂ ಜಮೀರ್ ಅಹ್ಮದ್ ಅವರ ಅಸಮಾಧಾನವೂ ಬಹಿರಂಗವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದು ಕೇವಲ ವೈಯಕ್ತಿಕ ಅಸಮಾಧಾನದ ಪ್ರಶ್ನೆಯಲ್ಲ. ಪಕ್ಷದೊಳಗಿನ ಅಧಿಕಾರ ಸಮೀಕರಣಗಳು ಮತ್ತು ಕಾಣದ ರಾಜಕೀಯ ಶಕ್ತಿಗಳ ಪ್ರಭಾವವೂ ಈ ಬೆಳವಣಿಗೆಗಳ ಹಿಂದೆ ಕೆಲಸ ಮಾಡುತ್ತಿರುವಂತೆ ಗೋಚರಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪ್ರತಿಪಕ್ಷಗಳಿಗಿಂತ ಸ್ವಪಕ್ಷದ ನಾಯಕರನ್ನೂ ಸಮಾಧಾನಪಡಿಸುವುದು ದೊಡ್ಡ ಸವಾಲಾಗಿದೆ. ಒಳಬಂಡಾಯ ಹೀಗೆ ಮುಂದುವರಿದರೆ ಸರ್ಕಾರದ ಸ್ಥಿರತೆ ಪ್ರಶ್ನಾರ್ಥಕವಾಗುವ ಸಾಧ್ಯತೆಯನ್ನು ನಿರಾಕರಿಸಲಾಗದು.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅವಧಿಗೂ ಮುನ್ನ ರಾಜಕೀಯ ಬೆಳವಣಿಗೆಗಳು ಅಥವಾ ಚುನಾವಣೆಗಳ ಸಾಧ್ಯತೆಯನ್ನೂ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ರಾಮು ನಾಯ್ಕ ತಿಳಿಸಿದ್ದಾರೆ.