ಎ.ಜಿ. ರಿಕ್ರಿಯೇಷನ್ ಕ್ಲಬ್ ಮೇಲೆ ಶಿರಸಿ ಪೊಲೀಸರ ಭರ್ಜರಿ ರೇಡ್; 57 ಜನರ ವಿರುದ್ಧ ಪ್ರಕರಣ
ಸಿದ್ದಾಪುರ: ತಾಲೂಕಿನ ಮಳವಳ್ಳಿ ಗ್ರಾಮದ ಹೊನ್ನುಕಾರು ಹೋಂಸ್ಟೇ ಸಮೀಪ ಕಾರ್ಯನಿರ್ವಹಿಸುತ್ತಿದ್ದ ಎ.ಜಿ. ರಿಕ್ರಿಯೇಷನ್ ಕ್ಲಬ್ ಮೇಲೆ ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ, ಅಕ್ರಮ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 57 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದೆ.
ಜೂನ್ 4ರಂದು ರಾತ್ರಿ ಸುಮಾರು 9.15 ಗಂಟೆ ವೇಳೆಗೆ ಕ್ಲಬ್ನಲ್ಲಿ ಹಣದ ಬದಲಿಗೆ ವಿವಿಧ ಮುಖಬೆಲೆಯ ಟೋಕನ್ಗಳನ್ನು ಬಳಸಿ ಇಸ್ಪೀಟ್ ಎಲೆಗಳ ಜೂಜಾಟ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಪಂಚರ ಸಮ್ಮುಖದಲ್ಲಿ ದಾಳಿ ನಡೆಸಿದ ವೇಳೆ ಸಾಗರ, ಸಿದ್ದಾಪುರ, ತೀರ್ಥಹಳ್ಳಿ, ಹೊಸನಗರ ಹಾಗೂ ಶಿರಸಿ ಭಾಗಗಳ ಹಲವರು ಜೂಜಾಟದಲ್ಲಿ ತೊಡಗಿರುವುದು ಪತ್ತೆಯಾಯಿತು.
ಪ್ರಕರಣದಲ್ಲಿ ಕಾರ್ಗಲ್ನ ಜೆ. ಲೋಕರಾಜ್, ತಲವಾಟದ ಗಣಪತಿ ದೇವಪ್ಪ, ನೆಜ್ಜೂರಿನ ಲಿಂಗರಾಜ್ ಲಕ್ಷ್ಮಣ, ಇಡುವಾಣಿಯ ಅನಂತ ಗಣಪತಿ ಭಟ್, ತೀರ್ಥಹಳ್ಳಿಯ ವಿಜಯ ಮಹಾಬಲೇಶಚಾರ್ಯ, ತಲವಾಟದ ಕಮಲಾಕರ ಭಟ್, ಮುಂಡಿಗೆಸರದ ರಾಜಾರಾಮ ಹರೀಭಟ್, ನೆಜ್ಜೂರಿನ ಅಚ್ಚುತ ಶ್ರೀಧರ ರಾಯ್ಕರ್, ಉಳ್ಳೂರಿನ ಮಂಜುನಾಥ ಮಹಾಬಲಗಿರಿ, ನೆಜ್ಜೂರಿನ ಜಹೀರ್ ಖಾನ್ ಸೇರಿದಂತೆ ಒಟ್ಟು 50 ಮಂದಿಯನ್ನು ಆರೋಪಿಗಳನ್ನಾಗಿ ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ.
ಇದಲ್ಲದೆ, ಜೂಜಾಟಕ್ಕೆ ಆಟಗಾರರನ್ನು ಕರೆತರುತ್ತಿದ್ದ ಹೊಸನಗರದ ಸುಭಾಷ ಎಸ್. ಹಾಗೂ ಜೂಜುಕೋರರಿಗೆ ಟೀ ಮತ್ತು ಊಟೋಪಚಾರದ ವ್ಯವಸ್ಥೆ ಮಾಡುತ್ತಿದ್ದ ಜೋಯಿಸ್ಟನ್, ದೊರೆಸ್ವಾಮಿ, ಬೀರಪ್ಪ ಮತ್ತು ಸಂತೋಷ ಎಂಬ ಐವರು ಸಿಬ್ಬಂದಿಯನ್ನೂ ಪ್ರಕರಣದಲ್ಲಿ ಸೇರಿಸಲಾಗಿದೆ.
ಕ್ಲಬ್ನ ಮಾಲೀಕರಾದ ಮಳವಳ್ಳಿಯ ಗಣೇಶ ಲಕ್ಷ್ಮಣ ನಾಯ್ಕ ಮತ್ತು ವ್ಯವಸ್ಥಾಪಕರಾಗಿದ್ದ ಗುರು ಭಟ್ ಅವರು ಕ್ಲಬ್ನ ನಿಯಮಾವಳಿಗಳನ್ನು ಉಲ್ಲಂಘಿಸಿ ಜೂಜಾಟಕ್ಕೆ ಕಟ್ಟಡ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಿರುವ ಆರೋಪ ಎದುರಿಸುತ್ತಿದ್ದಾರೆ.
ದಾಳಿಯ ವೇಳೆ ಪೊಲೀಸರು ₹3,30,694 ನಗದು, ವಿವಿಧ ಮುಖಬೆಲೆಯ 831 ಟೋಕನ್ಗಳು, ಅಂದಾಜು ₹47,600 ಮೌಲ್ಯದ 46 ಮೊಬೈಲ್ ಫೋನ್ಗಳು, ಹಲವು ಇಸ್ಪೀಟ್ ಎಲೆಗಳ ಕಟ್ಟುಗಳು, ಜೂಜಾಟದ ಲೆಕ್ಕಪತ್ರಗಳಿರುವ ಮೂರು ರಿಜಿಸ್ಟರ್ಗಳು ಹಾಗೂ ಸಿಸಿಟಿವಿ ಡಿವಿಆರ್ ಅನ್ನು ವಶಪಡಿಸಿಕೊಂಡಿದ್ದಾರೆ.
ಸರ್ಕಾರದ ಪರವಾಗಿ ಡಿವೈಎಸ್ಪಿ ಗೀತಾ ಪಾಟೀಲ್ ನೀಡಿದ ದೂರಿನ ಆಧಾರದ ಮೇಲೆ ಮೊದಲು ಎನ್ಸಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದ ಅನುಮತಿ ಪಡೆದ ಬಳಿಕ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.