ಕುಮಟಾ: ಬಚ್ಚಲುಮನೆಯಲ್ಲಿ ಸೀಮೆಎಣ್ಣೆ ಬಳಸಿ ಒಲೆ ಹಚ್ಚುವ ವೇಳೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕುಮಟಾ ವ್ಯಾಪ್ತಿಯಲ್ಲಿ ನಡೆದಿದೆ.
ಫಿರ್ಯಾದಿದಾರರಾದ ಕುಮಟಾದ ಕಿಮಾನಿ ನಿವಾಸಿ ಹಸೀನಾ ಮೇ 4ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಪ್ರಕಾರ, ವನ್ನಳ್ಳಿ ಗ್ರಾಮದ ಶಾಹೀನ್ (28) ಅವರು ಏಪ್ರಿಲ್ 22ರಂದು ಬೆಳಿಗ್ಗೆ ತಮ್ಮ ಮನೆಯಲ್ಲಿ ಬಚ್ಚಲುಮನೆಯಲ್ಲಿ ಒಲೆ ಹಚ್ಚುವ ವೇಳೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.
ಈ ವೇಳೆ ಆಕಸ್ಮಿಕವಾಗಿ ಕೈಯಲ್ಲಿದ್ದ ಸೀಮೆಎಣ್ಣೆ ಬಾಟಲಿಗೆ ಬೆಂಕಿ ಹತ್ತಿಕೊಂಡು ದೊಡ್ಡ ಪ್ರಮಾಣದಲ್ಲಿ ಜ್ವಾಲೆ ಎದ್ದಿದ್ದು, ಅವರ ಬಟ್ಟೆಗೆ ತಾಗಿ, ಮುಖ, ಮೈ ಹಾಗೂ ಕೈ ಭಾಗಗಳಲ್ಲಿ ತೀವ್ರ ಸುಟ್ಟ ಗಾಯಗಳಾಗಿದ್ದವು.
ಗಂಭೀರವಾಗಿ ಗಾಯಗೊಂಡ ಶಾಹೀನ್ ಅವರನ್ನು ತಕ್ಷಣ ಮಂಗಳೂರು ನಗರದ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 3ರಂದು ರಾತ್ರಿ ಮೃತಪಟ್ಟಿದ್ದಾರೆ.
ಈ ಘಟನೆ ಆಕಸ್ಮಿಕವಾಗಿಯೇ ಸಂಭವಿಸಿದ್ದು ಯಾವುದೇ ಸಂಶಯಾಸ್ಪದ ಅಂಶಗಳಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.