ಕುಮಟಾ: ಬಿರಿಯಾನಿಯ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆರಂಭವಾದ ಮಾತಿನ ಚಕಮಕಿಯು ಹಲ್ಲೆ ಪ್ರಕರಣಕ್ಕೆ ತಿರುಗಿದ ಘಟನೆ ಕುಮಟಾದ ವರದಾ ಬಾರ್ & ರೆಸ್ಟೋರೆಂಟ್ನಲ್ಲಿ ನಡೆದಿದ್ದು, ಬಾರ್ ಮ್ಯಾನೇಜರ್ ಸೇರಿದಂತೆ ಹಲವರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಶಿಹಿತ್ತಲದ ಮೂರ್ತಿ ಮಾಸ್ತಿ ಹರಿಕಂತ್ರ (32) ನೀಡಿದ ದೂರಿನ ಆಧಾರದ ಮೇಲೆ, ಭಟ್ಕಳ ತಾಲೂಕಿನ ಮಂಕಿಯ ಉದಯ ಗೋವಿಂದ ನಾಯ್ಕ, ಶ್ರೀಧರ ನಾಯ್ಕ, ನಾರಾಯಣ ಗೌಡ, ಬಾಬು ಹಾಗೂ ಇನ್ನುಳಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜೂನ್ 5ರಂದು ಮಧ್ಯಾಹ್ನ ಸುಮಾರು 2.30 ಗಂಟೆಗೆ ಮೂರ್ತಿ ಹರಿಕಂತ್ರ, ಅವರ ಸ್ನೇಹಿತರಾದ ಸೂರಜ್ ಹಾಗೂ ಪಾಂಡುರಂಗ ಹರಿಕಂತ್ರ ಅವರೊಂದಿಗೆ ಕುಮಟಾದ ವರದಾ ಬಾರ್ & ರೆಸ್ಟೋರೆಂಟ್ಗೆ ತೆರಳಿ ಬಿಯರ್ ಸೇವಿಸಿದ ಬಳಿಕ ಮಟನ್ ಬಿರಿಯಾನಿಗೆ ಆರ್ಡರ್ ನೀಡಿದ್ದರು.
ಊಟದ ವೇಳೆ ಬಿರಿಯಾನಿಯ ಗುಣಮಟ್ಟದ ಬಗ್ಗೆ ವೇಟರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಷಯವನ್ನು ವೇಟರ್ ಬಾರ್ನ ಮ್ಯಾನೇಜರ್ ಉದಯ ನಾಯ್ಕ ಅವರ ಗಮನಕ್ಕೆ ತಂದಿದ್ದಾರೆ.
ಈ ವೇಳೆ ಮ್ಯಾನೇಜರ್ ಉದಯ ನಾಯ್ಕ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಳಿಕ ಸಿಬ್ಬಂದಿ ಹಾಗೂ ಇತರರನ್ನು ಕರೆಸಿಕೊಂಡು ದೂರುದಾರ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆ ವೇಳೆ ಆರೋಪಿತರ ಪೈಕಿ ಒಬ್ಬ ವ್ಯಕ್ತಿ ಅಡುಗೆ ಮಾಡುವ ಸೌಟ್ (ಅಡುಗೆ ಸಲಕರಣೆ) ಬಳಸಿ ಮೂರ್ತಿ ಅವರ ತಲೆಗೆ ಹೊಡೆದ ಪರಿಣಾಮ ಗಾಯ ಮತ್ತು ನೋವು ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಾಯಗೊಂಡ ಮೂರ್ತಿ ಹರಿಕಂತ್ರ ಅವರು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಯೇ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.