ಚಾಕು ತೋರಿಸಿ ₹60 ಸಾವಿರ ಸುಲಿಗೆ ಆರೋಪ; ಮೂವರ ವಿರುದ್ಧ ಪ್ರಕರಣ
ಭಟ್ಕಳ: ವಾಹನ ಸಾಲದ ಬಾಕಿ ಹಣ ವಸೂಲಿ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ಕಾರು ಅಡ್ಡಗಟ್ಟಿ ಬೆದರಿಸಿ, ಚಾಕು ತೋರಿಸಿ ₹60 ಸಾವಿರ ಸುಲಿಗೆ ಮಾಡಿರುವ ಆರೋಪದ ಮೇಲೆ ಮೂವರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆರ್ಲೆಸರ ವೆಂಕಟಾಪುರದ ಮಣಿಕಂಠ (28) ಅವರು ನೀಡಿದ ದೂರಿನ ಪ್ರಕಾರ, ಶ್ರೀರಾಮ ಫೈನಾನ್ಸ್ನಿಂದ ವಾಹನ ಸಾಲ ಪಡೆದಿದ್ದು, ಸಾಲ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಆರೋಪಿತರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ದೂರಿನ ಪ್ರಕಾರ, ಜೀವನ (ರಂಗಿನಕಟ್ಟಾ, ಭಟ್ಕಳ) ನೀಡಿದ ಸೂಚನೆಯಂತೆ ಬೆಂಗಳೂರಿನ ರಾಜ್ ರಿಕವರಿ ಏಜೆನ್ಸಿಗೆ ಸೇರಿದ ಪ್ರದೀಪ ಮತ್ತು ಸೀನು ಎಂಬುವರು ಮೇ 2ರಂದು ಸಂಜೆ ಸುಮಾರು 5 ಗಂಟೆಗೆ ಹೆಬ್ಬಾಳದ ಬಿ.ಎಲ್. ಸರ್ಕಲ್ ಬಳಿ ಮಣಿಕಂಠ ಅವರು ಚಲಾಯಿಸುತ್ತಿದ್ದ ಸ್ವಿಫ್ಟ್ ಡಿಜೈರ್ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.ಬಳಿಕ ಕಾರಿನಿಂದ ಕೆಳಗಿಳಿಯುವಂತೆ ಬೆದರಿಸಿ, ತಕ್ಷಣ ₹60 ಸಾವಿರ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಹಣ ನೀಡದಿದ್ದರೆ ಜನರನ್ನು ಕರೆಸಿ ಹಲ್ಲೆ ಮಾಡುವುದಾಗಿ ಬೆದರಿಸಿದ್ದು, ಕಾಲರ್ ಹಿಡಿದು ಚಾಕು ತೋರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಣಿಕಂಠ ಅವರ ಬಳಿ ₹30 ಸಾವಿರ ಮಾತ್ರ ಇದೆ ಎಂದು ತಿಳಿಸಿದಾಗ, ಅವರನ್ನು ಸಮೀಪದ ಎಟಿಎಂಗೆ ಕರೆದೊಯ್ದು ₹20 ಸಾವಿರ ಹಣವನ್ನು ತೆಗೆಸಿಕೊಂಡಿದ್ದಾರೆ. ಬಳಿಕ ಮತ್ತಷ್ಟು ಒತ್ತಡ ಹೇರಿ ಲೋಕೇಶ್ ಕುಮಾರ್ ಎಂಬುವವರ ಕ್ಯೂಆರ್ ಕೋಡ್ಗೆ ₹10 ಸಾವಿರ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ರೀತಿ ಬೆದರಿಕೆ ಹಾಗೂ ಬಲವಂತದ ಮೂಲಕ ಒಟ್ಟು ₹60 ಸಾವಿರ ಸುಲಿಗೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.