ನವದೆಹಲಿ: ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ಕುರಿತಂತೆ ದೇಶಾದ್ಯಂತ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಕೇಂದ್ರ ಗೃಹ ಸಚಿವ Amit Shah ಅವರು ಕ್ಷೇತ್ರ ಮರುವಿಂಗಡಣೆಯ ಬಳಿಕ ಕರ್ನಾಟಕಕ್ಕೆ ಹೆಚ್ಚುವರಿ ಸ್ಥಾನಗಳು ಲಭ್ಯವಾಗಲಿವೆ ಎಂದು ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಪುನರ್ವಿಂಗಡಣೆಯ ನಂತರ ಅವುಗಳ ಸಂಖ್ಯೆ 42ಕ್ಕೆ ಏರಿಕೆಯಾಗಲಿದೆ ಎಂದು ಅವರು ತಿಳಿಸಿದರು. ಅಂದರೆ ರಾಜ್ಯದ ಪ್ರಾತಿನಿಧ್ಯವು 14 ಸ್ಥಾನಗಳಷ್ಟು ಹೆಚ್ಚಾಗಲಿದೆ.
ದಕ್ಷಿಣ ರಾಜ್ಯಗಳಿಗೆ ಈ ಮಸೂದೆಯಿಂದ ಅನ್ಯಾಯವಾಗಲಿದೆ ಎಂಬ ಆರೋಪಗಳಿಗೆ ಉತ್ತರಿಸಿದ ಅವರು, ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯವೂ ತನ್ನ ರಾಜಕೀಯ ಶಕ್ತಿಯನ್ನು ಕಳೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬದಲಿಗೆ ಸಂಸದರ ಸಂಖ್ಯೆ ಹೆಚ್ಚಾಗಲಿದ್ದು, ಪ್ರಾತಿನಿಧ್ಯವೂ ವಿಸ್ತಾರವಾಗಲಿದೆ ಎಂದು ಭರವಸೆ ನೀಡಿದರು.
ಸಚಿವರ ವಿವರಗಳ ಪ್ರಕಾರ, ಪ್ರಸ್ತುತ 543 ಸದಸ್ಯರಿರುವ ಲೋಕಸಭೆಯಲ್ಲಿ ದಕ್ಷಿಣ ಭಾರತದ ಐದು ರಾಜ್ಯಗಳಿಗೆ ಒಟ್ಟು 129 ಸದಸ್ಯರಿದ್ದು (ಶೇ. 23.76) ಪುನರ್ವಿಂಗಡಣೆಯ ನಂತರ ಹೊಸ ಸದನದಲ್ಲಿ ದಕ್ಷಿಣ ರಾಜ್ಯಗಳ ಒಟ್ಟು ಸದಸ್ಯರ ಸಂಖ್ಯೆ 195ಕ್ಕೆ ಏರಲಿದ್ದು, ಶೇಕಡಾವಾರು ಪಾಲು ಕೂಡ ಸುಮಾರು 23.9 ರಿಂದ 23.97ರ ನಡುವೆ ಉಳಿಯಲಿದೆ ಎಂದು ಅವರು ಹೇಳಿದರು.
ಕ್ಷೇತ್ರ ಮರುವಿಂಗಡಣೆ ಮತ್ತು ಸಂವಿಧಾನ ತಿದ್ದುಪಡಿ ಮಸೂದೆಗಳಿಂದ ದಕ್ಷಿಣದ ರಾಜ್ಯಗಳಿಗೆ ಹಾನಿಯಾಗಲಿದೆ ಎಂಬುದು ಕೇವಲ ತಪ್ಪು ಕಲ್ಪನೆ ಎಂದು Amit Shah ಪ್ರತಿಪಾದಿಸಿದರು. ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯವೂ ನಷ್ಟ ಅನುಭವಿಸುವುದಿಲ್ಲ ಎಂದು ಸದನದಲ್ಲಿ ಭರವಸೆ ನೀಡಿದರು.