ಅಂಕೋಲಾ: ಅಂಕೋಲಾ ತಾಲೂಕಿನ ಮಾದನಗೇರಿ ಅರಣ್ಯ ತಪಾಸಣಾ ಕೇಂದ್ರದ ಸಮೀಪ ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.
ಅಂಕೋಲಾ ತಾಲೂಕಿನ ಮೊಗಟಾ ನಿವಾಸಿ ದಿನೇಶ್ ವೆಂಕಟರಮಣ ನಾಯ್ಕ (45) ಗಾಯಗೊಂಡ ಬೈಕ್ ಸವಾರ. ಅವರು ಮಾದನಗೇರಿ ಕಡೆಯಿಂದ ಹೊಸಕಂಬಿ ಕಡೆಗೆ ರಾಜ್ಯ ಹೆದ್ದಾರಿ-143ರಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ದಿನೇಶ್ ನಾಯ್ಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸುತ್ತಿದ್ದಾಗ ಮಾದನಗೇರಿ ಅರಣ್ಯ ತಪಾಸಣಾ ಕೇಂದ್ರದ ಬಳಿ ಎರಡು ವಾಹನಗಳನ್ನು ಓವರ್ಟೇಕ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಎದುರಿನಿಂದ ಹೊಸಕಂಬಿ ಕಡೆಯಿಂದ ಮಾದನಗೇರಿ ಕಡೆಗೆ ಬರುತ್ತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸಮೇತ ರಸ್ತೆಗೆ ಬಿದ್ದ ದಿನೇಶ್ ನಾಯ್ಕ ಅವರಿಗೆ ಎರಡೂ ಕಾಲಿನ ಮಂಡಿ ಹಾಗೂ ಖಾಸಗಿ ಅಂಗಕ್ಕೆ ಗಾಯಗಳಾಗಿವೆ.
ಘಟನೆಗೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಮಹಾರಾಷ್ಟ್ರ ಮೂಲದ ಮಹಿಳೆ ಶ್ವೇತಾ ಅಕ್ಷಯ ತಾರದಾಳೆ ನೀಡಿದ ದೂರಿನ ಆಧಾರದ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.