ರಾಮನಗರ ಠಾಣೆಯಲ್ಲಿ ಸೈಬರ್ ವಂಚನೆ ಪ್ರಕರಣ ದಾಖಲು
ಕಾರವಾರ: ಮೊಬೈಲ್ ಸಾಫ್ಟ್ವೇರ್ ಅಪ್ಡೇಟ್ ಆದ ಕೆಲವೇ ನಿಮಿಷಗಳಲ್ಲಿ ಬ್ಯಾಂಕ್ ಖಾತೆಯಿಂದ ₹1.46 ಲಕ್ಷಕ್ಕೂ ಹೆಚ್ಚು ಹಣ ನಿಗೂಢವಾಗಿ ವರ್ಗಾವಣೆಯಾದ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ರಾಮನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಗಣೇಶಗುಡಿಯಲ್ಲಿ ವಾಸವಿರುವ ಶಿವಾನಂದ ರುದ್ರಪ್ಪ ಇಂಗಳಗಿ ನೀಡಿದ ದೂರಿನ ಪ್ರಕಾರ, ಜೂನ್ 12ರಂದು ಬೆಳಗ್ಗೆ ಸುಮಾರು 11.20ಕ್ಕೆ ಅವರ ಮೊಬೈಲ್ ಸ್ವಯಂಚಾಲಿತವಾಗಿ ಸಾಫ್ಟ್ವೇರ್ ಅಪ್ಡೇಟ್ ಆಗಿತ್ತು. ಅಪ್ಡೇಟ್ ಪೂರ್ಣಗೊಂಡ ಬಳಿಕ ಮಧ್ಯಾಹ್ನ ಗೂಗಲ್ ಪೇ ಮೂಲಕ ಹಣ ವರ್ಗಾಯಿಸಲು ಯತ್ನಿಸಿದಾಗ ಖಾತೆಯಲ್ಲಿ ಹಣ ಇಲ್ಲದಿರುವುದು ಗೊತ್ತಾಗಿದೆ.
ಪರಿಶೀಲಿಸಿದಾಗ, ಎಸ್ಬ್ಯಾಂಕ್ ಖಾತೆಯಿಂದ ₹96,800 ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಯಿಂದ ₹50,000 ಸೇರಿ ಒಟ್ಟು ₹1,46,800 ಹಣ ಅಪರಿಚಿತ ಖಾತೆಗಳಿಗೆ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.
ದೂರಿನ ಪ್ರಕಾರ, ಎಸ್ಬ್ಯಾಂಕ್ನಿಂದ ವರ್ಗಾವಣೆಯಾದ ಹಣ ಆರ್ಯನ್ ನೌಶಾದ್ ನೇಸರ್ಗಿ ಎಂಬುವರ ಖಾತೆಗೆ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ನಿಂದ ವರ್ಗಾವಣೆಯಾದ ಹಣ ಬಬುಸೋಣಾ ಸರ್ದಾರ್ ಎಂಬುವರ ಖಾತೆಗೆ ಜಮೆಯಾಗಿರುವುದಾಗಿ ಬ್ಯಾಂಕ್ ದಾಖಲೆಗಳಲ್ಲಿ ಕಂಡುಬಂದಿದೆ. ಈ ಇಬ್ಬರೂ ತನಗೆ ಪರಿಚಯವಿಲ್ಲ ಎಂದು ದೂರುದಾರರು ತಿಳಿಸಿದ್ದಾರೆ.
ಘಟನೆ ತಿಳಿದ ತಕ್ಷಣ ರಾಷ್ಟ್ರೀಯ ಸೈಬರ್ ಕ್ರೈಂ ಪೋರ್ಟಲ್ನಲ್ಲಿ ದೂರು ದಾಖಲಿಸಿದ್ದು, ಎರಡೂ ಬ್ಯಾಂಕ್ಗಳಿಗೂ ಮಾಹಿತಿ ನೀಡಲಾಗಿದೆ. ಬಳಿಕ ರಾಮನಗರ ಪೊಲೀಸ್ ಠಾಣೆಯಲ್ಲೂ ದೂರು ಸಲ್ಲಿಸಲಾಗಿದೆ.