ಶಿರಸಿ: ನಗರದ ಸಹ್ಯಾದ್ರಿ ಕಾಲೋನಿ ರಸ್ತೆ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟಕಾ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ಹೊಸ ಮಾರುಕಟ್ಟೆ ಪೊಲೀಸರು ದಾಳಿ ನಡೆಸಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಲಂಡಕನಳ್ಳಿ ನಿವಾಸಿ ಮಂಜುನಾಥ ಎಂ (42) ಹಾಗೂ ವಿವೇಕಾನಂದ ನಗರ ನಿವಾಸಿ ರಾಘವೇಂದ್ರ ರಾಮಚಂದ್ರ ಶೆಟ್ಟಿ ಆರೋಪಿಗಳಾಗಿದ್ದಾರೆ.
ಮಂಜುನಾಥ ಸಾರ್ವಜನಿಕರಿಗೆ ಅದೃಷ್ಟ ಸಂಖ್ಯೆಗಳ ಆಟವೆಂದು ಹೇಳಿ ಹಣ ಪಂಥವಾಗಿ ಕಟ್ಟಿಸಿಕೊಂಡು ಓಸಿ ಮಟಕಾ ಜೂಜಾಟ ನಡೆಸುತ್ತಿದ್ದ ವೇಳೆ ಪೊಲೀಸರು ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಜೂಜಾಟದಿಂದ ಸಂಗ್ರಹಿಸಿದ್ದ 910 ರೂ ನಗದು, ಅಂಕೆ-ಸಂಖ್ಯೆ ಬರೆದ ಚೀಟಿ, ಖಾಲಿ ಚೀಟಿಗಳು ಹಾಗೂ ಬಾಲ್ ಪೆನ್ ವಶಪಡಿಸಿಕೊಳ್ಳಲಾಗಿದೆ. ಸಂಗ್ರಹವಾದ ಹಣವನ್ನು ರಾಘವೇಂದ್ರ ಶೆಟ್ಟಿಗೆ ನೀಡಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹೊಸಮಾರುಕಟ್ಟೆ ಪೊಲೀಸ್ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.