ಕಾರವಾರ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 23ನೇ ಕಂತಿನ ಹಣವನ್ನು ಜೂನ್ 20ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಲಿದ್ದಾರೆ.
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರ್ನಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ದೇಶದಾದ್ಯಂತ ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ನೆರವು ಜಮೆ ಮಾಡಲಾಗುತ್ತದೆ.
ಈ ಬಾರಿ ಕರ್ನಾಟಕದ 41,54,160 ಫಲಾನುಭವಿ ರೈತರಿಗೆ ಒಟ್ಟು ₹830.832 ಕೋಟಿ ಆರ್ಥಿಕ ನೆರವು ದೊರೆಯಲಿದೆ. ಅರ್ಹ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ತಲಾ ₹2,000ರಂತೆ ಹಣ ಜಮೆಯಾಗಲಿದೆ.
ಪಿಎಂ-ಕಿಸಾನ್ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ಒಟ್ಟು ₹6,000 ನೆರವು ನೀಡಲಾಗುತ್ತದೆ. ಈ ಮೊತ್ತವನ್ನು ಮೂರು ಸಮಾನ ಕಂತುಗಳಾಗಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000ರಂತೆ ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.
ಕರ್ನಾಟಕದಲ್ಲಿ ಫೆಬ್ರವರಿ 2019ರಿಂದ ಈ ಯೋಜನೆ ಜಾರಿಯಲ್ಲಿದ್ದು, 2019ರ ಫೆಬ್ರವರಿ 1ರ ವೇಳೆಗೆ ಸಾಗುವಳಿ ಭೂಮಿ ಹೊಂದಿದ್ದ ಅರ್ಹ ರೈತ ಕುಟುಂಬಗಳು ಇದರ ಪ್ರಯೋಜನ ಪಡೆಯುತ್ತಿವೆ. ಕುಟುಂಬದ ಗಂಡ, ಹೆಂಡತಿ ಹಾಗೂ ಅಪ್ರಾಪ್ತ ಮಕ್ಕಳನ್ನು ಒಟ್ಟಾಗಿ ಒಂದು ಫಲಾನುಭವಿ ಕುಟುಂಬವೆಂದು ಪರಿಗಣಿಸಲಾಗುತ್ತದೆ.
ಜೂನ್ 20ರಂದು ನಡೆಯಲಿರುವ ಈ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ “ಪಿಎಂ ಕಿಸಾನ್ ಉತ್ಸವ ದಿವಸ್” ಆಗಿ ಆಚರಿಸುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಅಗತ್ಯ ಆರ್ಥಿಕ ನೆರವು ಒದಗಿಸುವ ಮೂಲಕ ರೈತರಿಗೆ ಸಕಾಲಿಕ ಬೆಂಬಲ ನೀಡುವ ಉದ್ದೇಶ ಹೊಂದಿದೆ.
23ನೇ ಕಂತಿನ ಬಿಡುಗಡೆಯೊಂದಿಗೆ ರಾಜ್ಯದ ಲಕ್ಷಾಂತರ ರೈತ ಕುಟುಂಬಗಳಿಗೆ ಮುಂಗಾರು ಹಂಗಾಮಿನ ಕೃಷಿ ಕಾರ್ಯಗಳಿಗೆ ಅಗತ್ಯ ಆರ್ಥಿಕ ನೆರವು ಲಭ್ಯವಾಗಲಿದೆ.