ಯಲ್ಲಾಪುರ/ಕಾರವಾರ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಕಾರವಾರದ ಕ್ರಿಮ್ಸ್ (ಸಿವಿಲ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಲ್ಲಾಪುರದ ಮಂಜುನಾಥನಗರದ ಮಾರ್ಕೊಸ್ ಅವರಿಗೆ ತುರ್ತಾಗಿ ಅಗತ್ಯವಿದ್ದ ಅಪರೂಪದ O-ನೆಗೆಟಿವ್ (O-ve) ರಕ್ತವನ್ನು ವ್ಯವಸ್ಥೆ ಮಾಡುವ ಮೂಲಕ ಪೊಲೀಸ್ ಸಿಬ್ಬಂದಿಯೊಬ್ಬರು ಮಾನವೀಯತೆ ಮೆರೆದ ಘಟನೆ ನಡೆದಿದೆ.
ಮಾರ್ಕೊಸ್ ಅವರ ಕೈ ಮುರಿದಿದ್ದರಿಂದ ಶಸ್ತ್ರಚಿಕಿತ್ಸೆಗೆ O-ನೆಗೆಟಿವ್ ರಕ್ತದ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಯಲ್ಲಾಪುರದ ಸತೀಶ ನಾಯ್ಕ, ಸಾಯಿನಾಥ ಉಣಕಲ್, ಮಾರುತಿ ತಿನೇಕರ್ ಹಾಗೂ ವಿಕ್ಟೋರಿಯಾ ಅವರು ರಕ್ತದಾನಿಗಳಿಗಾಗಿ ನಿರಂತರ ಹುಡುಕಾಟ ನಡೆಸಿದರೂ ಯಶಸ್ಸು ಸಿಗಲಿಲ್ಲ.
ನಂತರ ಕಾರವಾರದ Blood Donors Karwar ವಾಟ್ಸಾಪ್ ಗುಂಪಿನ ಅಡ್ಮಿನ್ ವಿನಾಯಕ ನಾಯ್ಕ ಚೆಂಡಿಯಾ ಅವರನ್ನು ಸಂಪರ್ಕಿಸಲಾಯಿತು. ಅವರು ನಿರಂತರ ಪ್ರಯತ್ನ ನಡೆಸಿ, ಕಾರವಾರ 112 ಪೊಲೀಸ್ ವಾಹನದ ಚಾಲಕರಾದ ಅನಂತ ನಾರಾಯಣ ನಾಯ್ಕ (ಬಾಡಾ, ಕುಮಟಾ) ಅವರನ್ನು ಸಂಪರ್ಕಿಸಿದರು.
ಅನಂತ ನಾರಾಯಣ ನಾಯ್ಕ ಅವರು ತಕ್ಷಣ ಸ್ಪಂದಿಸಿ ಅಪರೂಪದ O-ನೆಗೆಟಿವ್ ರಕ್ತದಾನ ಮಾಡಿದ್ದು, ಶಸ್ತ್ರಚಿಕಿತ್ಸೆಗೆ ಅಗತ್ಯವಿದ್ದ ರಕ್ತವನ್ನು ಒದಗಿಸುವ ಮೂಲಕ ಗಾಯಾಳು ಮಾರ್ಕೊಸ್ ಅವರ ಜೀವ ಉಳಿಸಲು ನೆರವಾದರು.
ಈ ಮಾನವೀಯ ಕಾರ್ಯಕ್ಕಾಗಿ ರಕ್ತದಾನ ಮಾಡಿದ ಅನಂತ ನಾರಾಯಣ ನಾಯ್ಕ ಹಾಗೂ ರಕ್ತದ ವ್ಯವಸ್ಥೆ ಮಾಡಿಕೊಟ್ಟ ವಿನಾಯಕ ನಾಯ್ಕ ಚೆಂಡಿಯಾ ಅವರಿಗೆ ಗಾಯಾಳುವಿನ ತಾಯಿ ಪ್ರಮಿಳಾ ಕೃತಜ್ಞತೆ ಸಲ್ಲಿಸಿದ್ದಾರೆ.