ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶಂಕರಾಚಾರ್ಯ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಕಚೇರಿಯ ಚುನಾವಣೆ ಶಾಖೆಯ ತಹಸೀಲ್ದಾರ ಪ್ರಮೋದ ನಾಯ್ಕ ಪುಷ್ಪನಮನ ಸಲ್ಲಿಸಿದರು.
ನಂತರ ಪದ್ಮಪುಷ್ಪ ವೇದಾಂತ ಸಂಸ್ಕೃತ ಗುರುಕುಲದ ಪ್ರಾಚಾರ್ಯರು ಹಾಗೂ ಸಂಸ್ಥಾಪಕ ಶಿವಮೂರ್ತಿ ಆರ್. ಜೋಯಿಸ್ ವಿಶೇಷ ಉಪನ್ಯಾಸ ನೀಡಿ, ಆದಿ ಶಂಕರಾಚಾರ್ಯರ ಜಯಂತಿಯನ್ನು ತತ್ವಜ್ಞಾನಿಗಳ ದಿನವಾಗಿ ಘೋಷಿಸಲಾಗಿದೆ. ಶಂಕರಾಚಾರ್ಯರು ಕರ್ಮ, ಉಪಾಸನೆ ಮತ್ತು ಜ್ಞಾನವನ್ನು ಅದ್ವೈತ ಸಿದ್ಧಾಂತದ ಮೂಲಕ ಜಗತ್ತಿಗೆ ಸಾರಿದ ಮಹಾನ್ ತತ್ವಜ್ಞಾನಿ ಎಂದು ಹೇಳಿದರು.
ಕರ್ಮವನ್ನು ಶ್ರದ್ಧೆಯಿಂದ ಮಾಡಿದಾಗ ಜ್ಞಾನ ಪ್ರಾಪ್ತಿಯಾಗಿ, ಜ್ಞಾನದಿಂದ ಮೋಕ್ಷ ದೊರೆಯುತ್ತದೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ. ನಾಮ ಹಲವು ಇದ್ದರೂ ಪರಮಾತ್ಮ ಒಬ್ಬನೇ ಎಂಬುದನ್ನು ಅದ್ವೈತ ತತ್ವದ ಮೂಲಕ ಎತ್ತಿಹಿಡಿದಿದ್ದಾರೆ ಎಂದರು.
ಶಂಕರಾಚಾರ್ಯರ ತತ್ವಗಳು, ಚಿಂತನೆಗಳು ಹಾಗೂ ದಾರ್ಶನಿಕ ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ವೆಂ.ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ವನಿತಾ ಶೇಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶಂಕರ ಮಠದ ಅಧ್ಯಕ್ಷ ಪ್ರಶಾಂತ ತೌಡುರು, ಸಮಾಜದ ಮಹಿಳಾ ಅಧ್ಯಕ್ಷೆ ವಿಜಯ ಮೋಹನ ಶೆಟ್ಟಿ, ಸಮಾಜದ ಅಧ್ಯಕ್ಷ ಜಗನಾಥ್ ಹಾಗೂ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು.