ಯಲ್ಲಾಪುರ: ಶಿರಸಿ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಜನಪ್ರತಿನಿಧಿ ಶ್ರೀಕಾಂತ ತಾರಿಬಾಗಿಲು ಅವರ ನಿಧನಕ್ಕೆ ಯಲ್ಲಾಪುರ–ಮುಂಡಗೋಡ–ಬನವಾಸಿ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀಕಾಂತ ತಾರಿಬಾಗಿಲು ಅವರು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಜನಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಸತತ ಐದು ಬಾರಿ ಶಿರಸಿ ನಗರಸಭೆಯ ಸದಸ್ಯರಾಗಿ ಹಾಗೂ ಎರಡು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಜನಪರ ಆಡಳಿತಕ್ಕೆ ಹೆಸರಾಗಿದ್ದರು ಎಂದು ಸ್ಮರಿಸಿದ್ದಾರೆ.
ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಸರಳ ವ್ಯಕ್ತಿತ್ವ ಹಾಗೂ ಸಮಾಜಮುಖಿ ಚಿಂತನೆ ಸದಾ ಸ್ಮರಣೀಯವಾಗಿರಲಿವೆ. ಅವರ ಅಗಲಿಕೆಯಿಂದ ಶಿರಸಿ ಭಾಗವು ಜನಪರ ನಾಯಕನನ್ನು ಕಳೆದುಕೊಂಡಿದ್ದು, ಸಾರ್ವಜನಿಕ ಬದುಕಿನಲ್ಲಿ ಅವರು ಸಲ್ಲಿಸಿದ ಸೇವೆ ಮತ್ತು ಸಮಾಜದ ಮೇಲಿನ ಕಾಳಜಿ ಸದಾ ಜನರ ಮನಸ್ಸಿನಲ್ಲಿ ಉಳಿಯಲಿದೆ ಎಂದು ಶಾಸಕ ಹೆಬ್ಬಾರ್ ಹೇಳಿದ್ದಾರೆ.
ದಿವಂಗತ ಶ್ರೀಕಾಂತ ತಾರಿಬಾಗಿಲು ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬದ ಸದಸ್ಯರು, ಬಂಧು-ಬಳಗ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಶಾಸಕ ಶಿವರಾಮ ಹೆಬ್ಬಾರ್ ಪ್ರಾರ್ಥಿಸಿದ್ದಾರೆ.