ಸಿದ್ದಾಪುರ: ತಾಲೂಕಿನಲ್ಲೊಂದು ಮನಕಲಕುವ ಘಟನೆ ನಡೆದಿದೆ. ಬಿ.ಕಾಂ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಮೂರು ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಡೆತ್ನೋಟ್ ಬರೆದು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ.
ಮೃತನನ್ನು ಅಭಿರಾಮ ವೆಂಕಟರಮಣ ಹೆಗಡೆ (21) ಎಂದು ಗುರುತಿಸಲಾಗಿದೆ. ಆತ ಸಿದ್ದಾಪುರ ನಿವಾಸಿಯಾಗಿದ್ದು, ಕಳೆದ ಎರಡು ವರ್ಷಗಳಿಂದ ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ. ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಮುಗಿಸಿಕೊಂಡು ಜೂನ್ 22ರಂದು ಮನೆಗೆ ಬಂದಿದ್ದ.
ಜೂನ್ 26ರಂದು ಮಧ್ಯಾಹ್ನ ತಂದೆ ವೆಂಕಟರಮಣ ಹೆಗಡೆ ಹಾಗೂ ತಾಯಿ ಕೆಲಸದ ನಿಮಿತ್ತ ಹೊರಗಿದ್ದ ವೇಳೆ, ಅಭಿರಾಮ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ನಾನಗೃಹದ ಪಕ್ಕಾಸಿಗೆ ಹಗ್ಗ ಕಟ್ಟಿ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆತ ಆತ್ಮಹತ್ಯೆಗೂ ಮುನ್ನ ತನ್ನ ನೋಟ್ಬುಕ್ನಲ್ಲಿ ಡೆತ್ನೋಟ್ ಬರೆದಿದ್ದಾನೆ. ಮೊದಲ ಪುಟದಲ್ಲಿ “ನನ್ನ ಸಾವಿಗೆ ನಾನೇ ಕಾರಣ” ಎಂದು ಬರೆದು ಸಹಿ ಮಾಡಿದ್ದಾನೆ. ಎರಡನೇ ಪುಟದಲ್ಲಿ, “ಈ ಸೆಮ್ ಎಕ್ಸಾಮ್ನಲ್ಲಿ ಮೂರು ಸಬ್ಜೆಕ್ಟ್ ಫೇಲ್ ಆಗಿದೆ. ನನಗೆ ಓದುವುದು ಅಷ್ಟಕ್ಕಷ್ಟೇ. ನನ್ನ ಭವಿಷ್ಯ ಚೆನ್ನಾಗಿರುವುದಿಲ್ಲ ಎಂದು ಗೊತ್ತು. ನನಗೆ ಯಾವುದೇ ಪ್ಯಾಷನ್ ಅಥವಾ ಯಾವುದಾದರೂ ಕ್ಷೇತ್ರದಲ್ಲಿ ಸಾಧಿಸಬೇಕು ಎಂಬ ಹಠ ಇಲ್ಲ. ಆದ್ದರಿಂದ ಬದುಕಿ ಪ್ರಯೋಜನ ಇಲ್ಲ” ಎಂದು ಬರೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಂದೆ ನೀಡಿದ ದೂರಿನಲ್ಲಿ ಮಗನ ಸಾವಿನ ಕುರಿತು ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದ್ದು, ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಗಮನಿಸಿ: ಪರೀಕ್ಷೆಯ ಫಲಿತಾಂಶವೇ ಜೀವನದ ಅಂತಿಮ ನಿರ್ಧಾರವಲ್ಲ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ ನಿರಾಶೆ, ಆತ್ಮಹತ್ಯೆಯ ಆಲೋಚನೆ ಅಥವಾ ತೀವ್ರ ಮಾನಸಿಕ ಒತ್ತಡ ಅನುಭವಿಸುತ್ತಿದ್ದರೆ, ಕುಟುಂಬದವರು, ಸ್ನೇಹಿತರು ಅಥವಾ ಮಾನಸಿಕ ಆರೋಗ್ಯ ತಜ್ಞರೊಂದಿಗೆ ತಕ್ಷಣ ಮಾತನಾಡಿ. ನೆರವು ಕೇಳುವುದು ದುರ್ಬಲತೆಯಲ್ಲ, ಅದು ಧೈರ್ಯದ ಹೆಜ್ಜೆ.