ಭಟ್ಕಳ: ಹೂವಿನ ತೋಟದಲ್ಲಿ ಹೂ ಕೊಯ್ಯಲು ತೆರಳಿದ್ದ 50 ವರ್ಷದ ಕೂಲಿ ಕಾರ್ಮಿಕನೊಬ್ಬ ವಿಷಪೂರಿತ ಹಾವು ಕಚ್ಚಿ ಮೃತಪಟ್ಟಿರುವ ಘಟನೆ ಭಟ್ಕಳ ತಾಲೂಕಿನ ಮೂಡಶಿರಾಲಿ-ಬೆಂಗ್ರೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ರಾಮಚಂದ್ರ ಬಡಿಯಾ ನಾಯ್ಕ (50) ಎಂದು ಗುರುತಿಸಲಾಗಿದೆ.
ಜೂನ್ 29ರಂದು ಬೆಳಿಗ್ಗೆ 6ರಿಂದ 6.45ರ ನಡುವೆ ರಾಮಚಂದ್ರ ಅವರು ತಮ್ಮ ಹೂವಿನ ತೋಟದಲ್ಲಿ ಹೂ ಕೊಯ್ಯುತ್ತಿದ್ದ ವೇಳೆ ವಿಷಪೂರಿತ ಹಾವು ಕಚ್ಚಿದೆ. ಬಳಿಕ ಅವರಿಗೆ ಸ್ಥಳೀಯವಾಗಿ ನಾಟಿ ಔಷಧ ನೀಡಲಾಗಿತ್ತು. ಆದರೆ ಬೆಳಿಗ್ಗೆ ಸುಮಾರು 9 ಗಂಟೆ ವೇಳೆಗೆ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು, ಅವರನ್ನು ತಕ್ಷಣ ಭಟ್ಕಳ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ, ಅವರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಈ ಕುರಿತು ಮೃತರ ಪುತ್ರ ಧನರಾಜ ರಾಮಚಂದ್ರ ನಾಯ್ಕ ಅವರು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.