ಯಲ್ಲಾಪುರ: ನ್ಯಾಯಾಲಯದ ವಿಚಾರಣೆ, ಮೇಲ್ಮನವಿ ಸೇರಿದಂತೆ ಹಲವು ಕಾನೂನು ಪ್ರಕ್ರಿಯೆಗಳ ಕಾರಣದಿಂದ ಸುಮಾರು ಒಂಬತ್ತು ತಿಂಗಳು ವಿಳಂಬವಾಗಿದ್ದ ಟಿಎಂಎಸ್ ಆಡಳಿತ ಮಂಡಳಿ ಚುನಾವಣೆಯ ಮತ ಎಣಿಕೆ ಸೋಮವಾರ ಪೂರ್ಣಗೊಂಡಿದ್ದು, ಅಗ್ಗಾಶಿಕುಂಬ್ರಿ ನಾರಾಯಣ ಭಟ್ಟ ನೇತೃತ್ವದ ತಂಡ ಭರ್ಜರಿ ಗೆಲುವು ಸಾಧಿಸಿದೆ.
ಒಟ್ಟು 14 ನಿರ್ದೇಶಕ ಸ್ಥಾನಗಳ ಪೈಕಿ ಅಗ್ಗಾಶಿಕುಂಬ್ರಿ ತಂಡ 12 ಸ್ಥಾನಗಳನ್ನು ತನ್ನದಾಗಿಸಿಕೊಂಡರೆ, ಪ್ರತಿಸ್ಪರ್ಧಿ ಬಟ್ಲಗುಂಡಿ ನಾರಾಯಣ ಭಟ್ಟರ ತಂಡ ಕೇವಲ 2 ಸ್ಥಾನಗಳಿಗೆ ಸೀಮಿತವಾಯಿತು. ವಿಶೇಷವೆಂದರೆ, ತಂಡದ ನೇತೃತ್ವ ವಹಿಸಿದ್ದ ಬಟ್ಲಗುಂಡಿ ನಾರಾಯಣ ಭಟ್ಟ ಅವರು ಸ್ವತಃ ಸೋಲು ಅನುಭವಿಸಿದರು.
ಈಗಾಗಲೇ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಹನುಮಂತ ಕೊರವರ ಹಾಗೂ ಹಿಂದುಳಿದ ‘ಬಿ’ ವರ್ಗದ ಸ್ಥಾನದಿಂದ ರಾಜೇಂದ್ರ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 12 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಅಗ್ಗಾಶಿಕುಂಬ್ರಿ ತಂಡ 10 ಸ್ಥಾನಗಳನ್ನು ಗೆದ್ದು ಸ್ಪಷ್ಟ ಮೇಲುಗೈ ಸಾಧಿಸಿತು.
ಬಟ್ಟಗುಂಡಿ ತಂಡಕ್ಕೆ 2 ಸ್ಥಾನಗಳು ಮಾತ್ರ ಲಭಿಸಿದವು.ಅಗ್ಗಾಶಿಕುಂಬ್ರಿ ತಂಡದಿಂದ ಪ್ರಾಥಮಿಕ ಸಹಕಾರಿ ಸಂಘಗಳ ಕ್ಷೇತ್ರದಲ್ಲಿ ನರಸಿಂಹ ಕೋಣೆಮನೆ, ಮಂಜುನಾಥ ಮಹಾದೇವ ಹೆಗಡೆ (ಜಡ್ಡಿಗದ್ದೆ), ಗಣಪತಿ ಹೆಗಡೆ (ಹಿತ್ತಳಿ), ಸುಬ್ಬಣ್ಣ (ಬೋಳನೆ), ಸಾಮಾನ್ಯ ಕ್ಷೇತ್ರದಲ್ಲಿ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಹಾಗೂ ವೆಂಕಟರಮಣ ಭಟ್ಟ ಕಿರಕುಂಭತ್ತಿ, ಮಹಿಳಾ ಕ್ಷೇತ್ರದಲ್ಲಿ ಸೀತಾ ಮೆಣಸುಮನೆ ಮತ್ತು ಸೌಮ್ಯಾ ಕಿಚ್ಚುಪಾಲ, ‘ಅ’ ವರ್ಗದಿಂದ ಅಪ್ಪು ಆಚಾರಿ ಹಾಗೂ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಸಾಲು ಸಿದ್ದಿ ಆಯ್ಕೆಯಾದರು.
ಬಟ್ಲಗುಂಡಿ ತಂಡದಿಂದ ಗಣಪತಿ ಮುದ್ದೆಪಾಲ ಮತ್ತು ಆರ್.ಎನ್. ಹೆಗಡೆ ಗೋರ್ಸಗದ್ದೆ ಮಾತ್ರ ಗೆಲುವು ದಾಖಲಿಸಿದರು. ಸಹಕಾರಿ ಇಲಾಖೆಯ ಸಹಾಯಕ ನಿಬಂಧಕ ಬಿ.ಡಿ. ಡಿಸೋಜಾ ಅವರ ನೇತೃತ್ವದಲ್ಲಿ ಐದು ಕೌಂಟರ್ಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಸಲಾಯಿತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅಗ್ಗಾಶಿಕುಂಬ್ರಿ ತಂಡದ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.