ಕಾರವಾರ: ಹೆಚ್ಚಿನ ಲಾಭಾಂಶದ ಆಮಿಷ ಒಡ್ಡಿ ಟ್ರೇಡಿಂಗ್ ಆ್ಯಪ್ ಮೂಲಕ ವ್ಯಕ್ತಿಯೊಬ್ಬರಿಂದ 16.78 ಲಕ್ಷ ರೂ. ವಂಚಿಸಿರುವ ಕುರಿತು ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಕೋಲಾದ ಮಠಾಕೇರಿ ನಿವಾಸಿ ರಾಮನಾಥ ಪೂರ್ಣಾನಂದ ಭಟ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮಾರ್ಚ್ 28ರಂದು ಇನ್ಸ್ಟಾಗ್ರಾಂ ಬಳಸುತ್ತಿದ್ದ ವೇಳೆ Smart Wise Quant Fund ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂಬ ಸಂದೇಶ ಬಂದಿತ್ತು. ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ ಬಳಿಕ ಅವರು ವಾಟ್ಸಪ್ ಗ್ರೂಪ್ಗೆ ಸೇರ್ಪಡೆಗೊಂಡಿದ್ದರು.
ಗ್ರೂಪ್ನಲ್ಲಿ ಅನನ್ಯಾ, ದಿವ್ಯಾ ಹಾಗೂ ಮೀರಾ ಎಂಬ ಹೆಸರಿನಲ್ಲಿ ಸಂಪರ್ಕದಲ್ಲಿದ್ದ ಆರೋಪಿತರು ಟ್ರೇಡಿಂಗ್ ಆ್ಯಪ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ದೊರೆಯುತ್ತದೆ ಎಂದು ನಂಬಿಸಿದ್ದರು. ಆರಂಭದಲ್ಲಿ ತರಬೇತಿ ನೀಡಿದ ಆರೋಪಿತರು ಬಳಿಕ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲು ಸೂಚಿಸಿದ್ದರು.
ಅದರಂತೆ ಫಿರ್ಯಾದಿದಾರರು ಮಾರ್ಚ್ 28ರಿಂದ ಮೇ 14ರವರೆಗೆ ಒಟ್ಟು 16,78,052 ರೂ. ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ಆದರೆ ಹೂಡಿಕೆ ಮಾಡಿದ ಹಣವೂ ಮರಳಿ ಸಿಗದೇ, ಯಾವುದೇ ಲಾಭಾಂಶವೂ ದೊರೆಯದೇ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕಾರವಾರ ಸೈಬರ್ ಅಪರಾಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.